ನಾನೇ ಮಗಳಿಗೆ ವಿಷ ಕುಡಿಸಿ, ನಂತ್ರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದೆ!

ಮೈಸೂರು: ನಗರದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಕೇಸ್‍ನ್ನು ಪೊಲೀಸರು ಬೇಧಿಸಿದ್ದು, ತಂದೆಯೇ ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಸುಷ್ಮಾ(20) ತಂದೆಯಿಂದಲೇ ಕೊಲೆಯಾದ ದುರ್ದೈವಿ ಮಗಳು. ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾಗಿದ್ದು, ಎಚ್.ಡಿ.ಕೋಟೆ ಆಲನಹಳ್ಳಿ ಗ್ರಾಮದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸಿದ್ದಳು. ಇವರ ಪ್ರೀತಿಗೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಪೋಷಕರು ಸುಷ್ಮಾಳನ್ನು ಕಾಲೇಜಿನಿಂದ ಬಿಡಿಸಿದ್ದರು.

ಕಾಲೇಜಿನಿಂದ ಬಿಡಿಸಿದ್ದರೂ ಕೂಡ ಸುಷ್ಮಾ ಯುವಕನೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದಳು. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ತಮ್ಮ ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್  ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ “ನಾನೇ ಮಗಳಿಗೆ ವಿಷ ಕುಡಿಸಿ ನಂತರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದಿದ್ದೇನೆ. ದಲಿತ ಯುವಕನನ್ನು ಪ್ರೀತಿ ಮಾಡೋದು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಎಂಟು ದಿನಗಳ ಹಿಂದೆ ಮಗಳನ್ನು ಕೊಂದಿದ್ದೇನೆ” ಎಂದು ಸುಷ್ಮಾ ತಂದೆ ಕುಮಾರ್ ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಓದಿ: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

Comments

Leave a Reply

Your email address will not be published. Required fields are marked *