ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. ಇಂದು ಬೆಳಗ್ಗೆ 8.26ರ ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಹಿರಿಯ ನಾಯಕರಾದ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚಾನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಪತ್ನಿ ಚನ್ನಮ್ಮ ಬೊಮ್ಮಾಯಿ, ಸಚಿವರಾದ ಎಸ್.ಟಿ.ಸೋಮಶೇಖರ್, ಆರ್.ಅಶೋಕ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಸುನೀಲ್ ಕುಮಾರ್, ನಾರಾಯಣ ಗೌಡ, ಭೈರತಿ ಬಸವರಾಜು, ಶಶಿಕಲಾ ಜೊಲ್ಲೆ, ಶಾಸಕರಾದ ಜಿಟಿಡಿ, ರಾಮದಾಸ್, ನಾಗೇಂದ್ರ, ಬೆಲ್ಲದ್, ತನ್ವೀರ್ ಸೇಠ್, ಎಚ್.ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ, ಡಾ.ಸುಧಾಕರ್, ಡಿಸಿ, ಪೊಲೀಸ್ ಆಯುಕ್ತರು ಸೇರಿ ನಿಗಮ ಮಂಡಳಿ ಅಧ್ಯಕ್ಷರ ಸಹಿತ ಹಲವರು ಉಪಸ್ಥಿತರಿದ್ದರು.

ಕೊರೋನಾ ಕಾರಣ ಉದ್ಘಾಟನಾ ಸಮಾರಂಭದಲ್ಲಿ 100 ಮಂದಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಜನ ಸಾಮಾನ್ಯರಿಗೆ ವೀಕ್ಷಣೆ ಮಾಡಲು ವಚ್ರ್ಯುವಲ್ ಮುಖಾಂತರ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ 6 ಗಂಟೆಗೆ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಇಂದಿನಿಂದ ಒಟ್ಟು 9 ದಿನಗಳ ಕಾಲ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 15ರಂದು ಜಂಬೂ ಸವಾರಿ ಮೆರವಣಿಗೆ ಮೂಲಕ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಕೊರೊನಾ ನಡುವೆ ಸಾವಿರಾರು ಬೆಂಬಲಿಗರೊಂದಿಗೆ ಎಂಎಲ್‍ಸಿ ಅದ್ದೂರಿ ಹುಟ್ಟುಹಬ್ಬ

ಇಂದು ಮುಂಜಾನೆಯಿಂದಲೇ ಅಂಬಾ ವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾಗಿದೆ. ಗತಕಾಲದ ವೈಭವ ಮರುಕಳಿಸಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನರೋಹಣ ಮಾಡಿ ದರ್ಬಾರ್ ನಡೆಸಲಿದ್ದಾರೆ. ಆದರೆ ಖಾಸಗಿ ದರ್ಬಾರ್ ನೋಡಲು ಈ ಬಾರಿಯೂ ಯಾರಿಗೂ ಅವಕಾಶ ನೀಡಿಲ್ಲ. 7ನೇ ಬಾರಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜ ಪೋಷಾಕು ಧರಿಸಿ ಪ್ರವೇಶಿಸುತ್ತಿದ್ದಂತೆ ದರ್ಬಾರಿಗಳು ಬಹು ಪರಾಕ್ ಕೂಗಲಿದ್ದಾರೆ.

ಸಂಪ್ರದಾಯದಂತೆ ಸಿಂಹಾಸನಕ್ಕೆ ಪೂಜೆ, ನವಗ್ರಹ ಪೂಜೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಿ ಸಿಂಹಾಸನರೂಢರಾಗಲಿದ್ದಾರೆ. ಇದಾದ ನಂತರ ಅರಮನೆಯ ದೇವಸ್ಥಾನಗಳು ಚಾಮುಂಡಿಬೆಟ್ಟ ಬೆಟ್ಟ ಸೇರಿದಂತೆ ಹಲವು ದೇವಸ್ಥಾನಗಳಿಂದ ತಂದಿದ್ದ ಪ್ರಸಾದ ಸೇವನೆ ಮಾಡಲಾಗುತ್ತೆ. ಮಂಗಳ ಸ್ನಾನ ನೆರವೇರಿಸಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಯದುವೀರ್ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ. ಇದಾದ ಬಳಿಕ ಆರಮನೆಗೆ ಪಟ್ಟದ ಆನೆ, ಕುದರೆ, ಹಸುವನ್ನು ಕರೆಸಿ ಪೂಜೆ ಸಲ್ಲಿಸಲಾಗುತ್ತೆ. ಒಟ್ಟಾರೆ ಈ ಬಾರಿ ಅರಮನೆಯಲ್ಲಿ 10 ದಿನಗಳ ಕಾಲ ಸರಳವಾಗಿ ದಸರಾ ದರ್ಬಾರ್ ನಡೆಯಲಿದೆ.

Comments

Leave a Reply

Your email address will not be published. Required fields are marked *