ವಜ್ರಮುಷ್ಠಿ ಕಾಳಗದ ಉದ್ದೇಶ ತಿಳಿಸಿದ ಜಟ್ಟಿ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ಖಾಸಗಿ ದಸರಾದಲ್ಲಿ ವಜ್ರಮುಷ್ಠಿ ಕಾಳಗಕ್ಕೆ ವಿಶೇಷವಾದ ಸ್ಥಾನಮಾನವಿದೆ. ಈ ಕಾಳಗ ನಡಯದೇ ವಿಜಯದಶಮಿ ಕಾರ್ಯಕ್ರಮ ಸಂಪನ್ನವಾಗಲ್ಲ ಅನ್ನೋ ಪ್ರತೀತಿ ಹಿಂದಿನಿಂದಲೂ ಇದೆ. ಮೈನವಿರೇಳಿಸುವಂತಹ ಸಮರ ಕಲೆಯಾದ ಈ ವಜ್ರಮುಷ್ಠಿ ಕಾಳಗವನ್ನು ರಾಜ ಮಹಾರಾಜರ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಈ ಕಾಳಗದ ಉದ್ದೇಶವನ್ನು ಜಟ್ಟಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಜಟ್ಟಿ ಕಾಳಗದಲ್ಲಿ ಭಾಗವಹಿಸಲು ನಡೆಸಿದ ತಯಾರಿ ಬಗ್ಗೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ನಾರಾಯಣ ಜಟ್ಟಿ ಮಾತನಾಡಿ, ಆರು ತಿಂಗಳ ಮುಂಚೆ ಕಷ್ಣ ಜಟ್ಟಿಯವರು ತಯಾರಿ ನಡೆಸುವಂತೆ ಸೂಚನೆ ಕೊಡುತ್ತಾರೆ. ಹೀಗಾಗಿ ಊರಲ್ಲೇ ಫಿಟ್ನೆಸ್ ಗಾಗಿ ವ್ಯಾಯಾಮ, ಯೋಗ ಹಾಗೂ ಕರಾಟೆ, ಮಾರ್ಷಲ್ ಆರ್ಟ್ಸ್(Martial Arts) ತರಬೇತಿ ಪಡೆಯುತ್ತೇನೆ ಎಂದರು.

20 ವರ್ಷದಿಂದ ಅಂದರೆ 1999 ನಿಂದ ಇಲ್ಲಿಯವರೆಗೂ ಜಟ್ಟಿ ಕಾಳಗದಲ್ಲಿ ಭಾಗವಹಿಸುತ್ತಿದ್ದೇನೆ. ಇಲ್ಲಿ ಸೋಲು-ಗೆಲುವೆಂಬುದಿಲ್ಲ. ಶಾಂತಿಗಾಗಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಚಾಮುಂಡೇಶ್ವರಿ ತಾಯಿಗೆ ನಮ್ಮ ರಕ್ತ ಅರ್ಪಿಸುವ ಉದ್ದೇಶ ತಲಾತಲಾಂತರಗಳಿಂದ ಬೆಳೆದು ಬಂದಿದೆ ಎಂದು ಅವರು ತಿಳಿಸಿದರು.

ಕುಲದೇವತೆಯ ಶಾಂತಿಗಾಗಿ ವಜ್ರಮುಷ್ಠಿ ಕಾಳಗವನ್ನು ಬೇರೆಲ್ಲೂ ಆಡದೇ ಅರಮನೆಯಲ್ಲಿ ಮಾತ್ರ ಆಡುತ್ತೇವೆ. ಇದರಿಂದಾಗುವ ಗಾಯ 2 ದಿನದಲ್ಲಿ ವಾಸಿಯಾಗುತ್ತದೆ. ದೊಡ್ಡ ಗಾಯವೇನೂ ಆಗಲ್ಲ. ಯಾಕೆಂದರೆ ದೇವಿಯ ವರ ಇದೆ ಅನಿಸುತ್ತದೆ. ಮರು ದಿನ ಟಿಂಚರ್ ಹಾಕಿದರೆ ಸರಿ ಹೋಗುತ್ತದೆ ಎಂದರು.

ಈ ಮೊದಲು ತಂದೆ ಭಾಗವಹಿಸುತ್ತಿದ್ದರು. ಸದ್ಯ ನಾನು ಪಾಲ್ಗೊಳ್ಳುತ್ತಿದ್ದೇನೆ. ಮುಂದೆ ನನ್ನ ಮಕ್ಕಳು ಜಟ್ಟಿ ಕಾಳಗದಲ್ಲಿ ಭಾಗವಹಿಸಬಹುದು. ಅವಕಾಶ ಸಿಕ್ಕಿದಾಗ ಬಂದು ಕಾಳಗದಲ್ಲಿ ಪಾಲ್ಗೊಳ್ಳುತ್ತೇವೆ. ಯಾಕೆಂದರೆ ಹೊಸಬರು ಬಂದಾಗ ಅವರಿಗೆ ನಾವು ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ 2, 3 ಅಥವಾ 5 ವರ್ಷಕ್ಕೊಮ್ಮೆ ಚಾನ್ಸ್ ಸಿಗುತ್ತದೆ.

ಇದಕ್ಕೂ ಮೊದಲು ಚನ್ನಪಟ್ಟಣದ ನರಸಿಂಹ ಜಟ್ಟಿ ಮಾತನಾಡಿ, ಈ ಹಿಂದೆ 2010ರಲ್ಲಿ ಭಾಗವಹಿಸಿದ ಬಳಿಕ ಈ ಬಾರಿ ಭಾಗವಹಿಸಿರುವುದಾಗಿ ತಿಳಿಸಿದರು. 2010ರಲ್ಲಿ ಜಟ್ಟಿ ಕಾಳಗದಲ್ಲಿ ಗೆದ್ದಿದ್ದೇವೆ. ವಂಶಪಾರಂಪರಿಕವಾಗಿ ಜಟ್ಟಿ ಕಾಳಗದಲ್ಲಿ ಭಾಗವಹಿಸುತ್ತಿದ್ದೇವೆ. ಇನ್ನು ಮುಂದೆ ಜಟ್ಟಿ ಕಾಳಗದಲ್ಲಿ ನಮ್ಮ ಕಿರಿಯರು ಕೂಡ ಭಾಗವಹಿಸಬೇಕು ಎಂದು ತಿಳಿಸಿದರು.

ಅರಮನೆ ಆವರಣದಲ್ಲಿರುವ ವರಹಸ್ವಾಮಿ ದೇವಸ್ಥಾನದ ಬಳಿ ಜಟ್ಟಿಗಳಿಗೆ ಕೆಮ್ಮಣ್ಣು ಹಾಗೂ ಕೈಗೆ ಬಟ್ಟೆಗಳನ್ನು ಕಟ್ಟುವ ಮೂಲಕ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಚನ್ನಪಟ್ಟಣ, ಚಾಮರಾಜನಗ ಹಾಗೂ ಮೈಸೂರು ಹೀಗೆ ಒಟ್ಟು 4 ಜಟ್ಟಿಗಳು ಈ ಕಾಳಗದಲ್ಲಿ ಭಾಗವಹಿಸಿದ್ದಾರೆ.

Comments

Leave a Reply

Your email address will not be published. Required fields are marked *