ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಖಾಕಿ ಕರೆತಂದ ಸೆಸ್ಕಾಂ – ಗ್ರಾಮಸ್ಥರ ಅಕ್ರೋಶ

ಮೈಸೂರು: ಗ್ರಾಮದ ಮನೆಗಳ ವಿದ್ಯುತ್ ಬಾಕಿ ಹಿನ್ನೆಲೆಯಲ್ಲಿ ರೈತರಿಂದ ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕಾಂ) ಅಧಿಕಾರಿಗಳು ಹೊಸ ರೀತಿಯ ವರಸೆ ಆರಂಭಿಸಿದ್ದು, ಪೊಲೀಸರ ಸಮ್ಮುಖದಲ್ಲಿ ಹಣ ಕಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.

ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸರ ಜೊತೆ ಆಗಮಿಸಿದ ಸೆಸ್ಕಾಂ ಅಧಿಕಾರಿಗಳು ರೈತರಿಂದ ಬಾಕಿ ವಸೂಲಿ ಮಾಡಲು ಮುಂದಾಗಿದ್ದಾರೆ. ಸದ್ಯ ಸೆಸ್ಕಾಂ ಸಿಬ್ಬಂದಿಗಳ ಈ ವರ್ತನೆಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದ್ದಾರೆ.

ಒಂದು ಗಂಟೆಗೂ ಹೆಚ್ಚು ಕಾಲ ಸೆಸ್ಕಾಂ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಈ ಕುರಿತು ಮಾತಿನ ಚಕಮಕಿ ನಡೆಯಿತು. ಸೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸರಿಗೆ ಗ್ರಾಮದ ಒಳಗೆ ಕಾಲಿಡದಂತೆ ಗ್ರಾಮಸ್ಥರು ರೈತರು ತಡೆಯೊಡ್ಡಿದರು.

ಈ ಕುರಿತು ಗ್ರಾಮಸ್ಥರೊಂದಿಗೆ ತಮ್ಮ ಕಾರ್ಯದ ಕುರಿತು ವಾದ ಮಂಡಿಸಿದ ಅಧಿಕಾರಿಗಳು, ಹಲವು ವರ್ಷಗಳಿಂದ ವಿದ್ಯುತ್ ಬಿಲ್ ಬಾಕಿ ಇದೆ. ಬಿಲ್ ಕೇಳಲು ಬಂದರೆ ನೀವು ನಮ್ಮ ಮೇಲೆ ದರ್ಪ ಮಾಡಿತ್ತೀರಾ. ಈ ಹಿನ್ನಲೆಯಲ್ಲಿ ಪೊಲೀಸರನ್ನು ಜೊತೆಗೆ ಕರೆದುಕೊಂಡು ಬಂದಿದ್ದೇವೆ. ವಿದ್ಯುತ್ ಹಣವನ್ನು ಸ್ಥಳದಲ್ಲೇ ಪಾವತಿ ಮಾಡುವಂತೆ ಪಟ್ಟು ಹಿಡಿದರು. ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ ಮಳೆ ಬೆಳೆ ಇಲ್ಲದೇ ನಷ್ಟ ಅನುಭವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಎಲ್ಲಾ ಹಣ ನೀಡಲು ಸಾಧ್ಯವಿಲ್ಲ ಮೊದಲಿನಂತೆ ಹಂತ ಹಂತವಾಗಿ ಹಣ ಪಾವತಿ ಮಾಡುವುದಾಗಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *