ಸಿದ್ದರಾಮಯ್ಯ, ಹೆಚ್‍ಡಿಡಿ ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ: ವಿ.ಶ್ರೀನಿವಾಸ್ ಪ್ರಸಾದ್

– ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದು

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡ ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ಮಾಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದು. ದೇವೇಗೌಡರು ಸಹ ಬೆನ್ನಿಗೆ ಚೂರಿ ಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಅಪ್ಪನಾಣೆ ಇಟ್ಟುಕೊಂಡು ಮಾತನಾಡಿದರು. ಆದರೆ ಲೋಕಸಭೆಯಲ್ಲಿ ಭಾಯಿ, ಭಾಯಿ ಎಂದು ಅಕ್ಕಪಕ್ಕದಲ್ಲಿ ಕುಳಿತುಕೊಂಡರು ಎಂದು ವ್ಯಂಗ್ಯವಾಡಿದರು.

ಕಳೆದ ಮೂರು ದಿನದಿಂದ ಒಬ್ಬರ ಮೇಲೋಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಇವರನ್ನು ನೋಡಿ ಜನ ಅಸಹ್ಯ ಪಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದೀರಾ. ಈಗಲಾದರೂ ಗಂಭೀರವಾಗಿ ಇರುವುದನ್ನು ಕಲಿಯಿರಿ ಎಂದು ದೇವೇಗೌಡರು ಹಾಗೂ ಸಿದ್ದರಾಮಯ್ಯಗೆ ಹೆಸರನ್ನು ಹೇಳಿ ವಿ.ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿದರು.

ಮಾನಸಿಕವಾಗಿ ಅವರು ಮೈತ್ರಿಯಾಗಿರಲಿಲ್ಲ. ದೈಹಿಕವಾಗಿ ಬಂದು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್ ಎತ್ತಿ ಆಗಿನ ಸಿಎಂ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಂಡಿದ್ದು ಸಿದ್ದರಾಮಯ್ಯನೇ ಅಲ್ವಾ. ಈಗ ಏಕೆ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಇವರ ಹೇಳಿಕೆಗಳನ್ನು ನೋಡುತ್ತಿದ್ದರೆ ಜನರಿಗೆ ಅಸಹ್ಯವಾಗುತ್ತದೆ ಎಂದು ಕಿಡಿಕಾರಿದರು.

Comments

Leave a Reply

Your email address will not be published. Required fields are marked *