ತಂದೆಯ ಬಗ್ಗೆ ರಿಯಲ್ ಎಸ್ಟೇಟ್ ದಲ್ಲಾಳಿಗೆ ಏನ್ ಗೊತ್ತು- ಎಚ್. ವಿಶ್ವನಾಥ್ ಪುತ್ರ

– ಸಾ.ರಾ. ಮಹೇಶ್ ರಾಜಕೀಯ ವ್ಯಭಿಚಾರದ ಸೃಷ್ಟಿಕರ್ತ
– ತಂದೆ ಇಲ್ಲದಿದ್ದರೆ ಸಾ.ರಾ ಮಹೇಶ್ ಎಲ್ಲಿ ಗೆಲ್ಲುತ್ತಿದ್ದರು

ಮೈಸೂರು: 28 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ ಎಂಬ ಸಚಿವ ಸಾ.ರಾ. ಮಹೇಶ್ ಆರೋಪಕ್ಕೆ ಎಚ್. ವಿಶ್ವನಾಥ್ ಅವರ ಪುತ್ರ, ಜಿಲ್ಲಾ ಪಂಚಾಯತ್ ಸದಸ್ಯ ಅಮಿತ್ ದೇವರಹಟ್ಟಿ ತಿರುಗೇಟು ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಮಿತ್, ಸಾ.ರಾ. ಮಹೇಶ್ ರಾಜಕೀಯ ವ್ಯಭಿಚಾರದ ಸೃಷ್ಟಿಕರ್ತ. ನಾವು 28 ಕೋಟಿಗಲ್ಲ 28 ರೂಪಾಯಿಗೂ ಸೇಲ್ ಆಗಿಲ್ಲ. ನನ್ನ ತಂದೆಯ ಪ್ರಾಮಾಣಿಕತೆಯ ಬಗ್ಗೆ ರಿಯಲ್ ಎಸ್ಟೇಟ್ ದಲ್ಲಾಳಿಗೆ ಏನು ಗೊತ್ತು. ಈ ರಾಜಕೀಯ ಗದ್ದಲ ಮುಗಿಯಲು ಕಾನೂನಾತ್ಮಕವಾಗಿ ಮತ್ತು ಆಣೆ ಪ್ರಮಾಣದ ವಿಚಾರದಲ್ಲೂ ನಾವು ಮುಂದುವರಿಯುತ್ತೇವೆ ಎಂದರು.

ನಾವು ಸುಮ್ನೆ ಕುಳಿತುಕೊಳ್ಳೋಕೆ ಸಾರಾ ಮಹೇಶ್ ಮನೆಯ ಕೆಲಸದಾಳುಗಳಲ್ಲ ಎಂದು ತಿರುಗೇಟು ನೀಡಿದರು. ಸಾ.ರಾ ಮಹೇಶ್ ಪುಂಖಾನು ಪುಂಖವಾಗಿ ಕಥೆ ಕಟ್ಟುತ್ತಿದ್ದಾರೆ. ನಮ್ಮ ತಂದೆ ಇಲ್ಲದಿದ್ದರೆ ಸಾ.ರಾ ಮಹೇಶ್ ಎಲ್ಲಿ ಗೆಲ್ಲುತ್ತಿದ್ದರು ಎಂದು ಗುಡುಗಿದರು.

ಕಳೆದ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಗಮನಿಸಿ. ಆಗ ಸಾ.ರಾ ಮಹೇಶ್ ಗೆಲುವಿನಲ್ಲಿ ನಮ್ಮ ತಂದೆಯ ಪಾತ್ರ ಗೊತ್ತಾಗುತ್ತದೆ. ಸಾ.ರಾ ಮಹೇಶ್‍ಗೆ ಇಬ್ಬರು ಮಕ್ಕಳು. ನನಗೆ ಒಬ್ಬನೇ ಮಗ ಅವನ ಮೇಲಾಣೆ ನಾವು ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲ. ಸಾ.ರಾ ಮಹೇಶ್ ಮಂತ್ರಿ ಸ್ಥಾನ ಕಳೆದುಕೊಳ್ಳುವ ಹಾತಾಶೆಯಿಂದ ಆರೋಪ ಮಾಡುತ್ತಿದ್ದಾರೆ ಎಂದು ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಅವರದ್ದು ಆಧಾರ ರಹಿತ ಆರೋಪ. ಯಾವುದೇ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ನಮ್ಮಲ್ಲಿಯೂ ದಾಖಲೆಗಳಿವೆ ಅದನ್ನ ನಾವು ಸಹ ಬಿಡುಗಡೆ ಮಾಡುತ್ತೇವೆ. ಜೆಡಿಎಸ್ ಪಕ್ಷಕ್ಕೆ ನಮ್ಮ ತಂದೆಯನ್ನ ಕರೆತಂದದ್ದು ಸಾ.ರಾ ಮಹೇಶ್ ಅಲ್ಲ. ನಮ್ಮ ಅಪ್ಪನನ್ನ ಪಕ್ಷಕ್ಕೆ ಕರೆ ತಂದವರು ಮಧು ಬಂಗಾರಪ್ಪ, ಸಚಿವ ಜಿ.ಟಿ.ಡಿ ಪುತ್ರ ಹರೀಶ್ ಗೌಡ ಹಾಗೂ ಮಾಜಿ ಶಾಸಕ ದಿ.ಚಿಕ್ಕಮಾದು ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *