ಗೋವು ರಕ್ಷಣೆ ನಿರತ ಮುಸ್ಲಿಂ ಮಹಿಳೆಗೆ ಜೀವ ಬೆದರಿಕೆ! ರಕ್ಷಣೆಗೆ ಪ್ರಧಾನಿಗೆ ಮನವಿ

ಭೋಪಾಲ್: ಗೋವುಗಳ ಸಂರಕ್ಷಣೆಯಲ್ಲಿ ನಿರತರಾಗಿರುವ ಮುಸ್ಲಿಂ ಮಹಿಳೆಯೊಬ್ಬರಿಗೆ ಸಂಬಂಧಿಕರೇ ಜೀವ ಬೆದರಿಕೆ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ.

ಮಧ್ಯಪ್ರದೇಶದ ರಾಷ್ಟ್ರೀಯ ಗೋವು ರಕ್ಷಾ ವಾಹಿಣಿ ಅಧ್ಯಕ್ಷೆ ಮೆಹ್ರುನ್ನೀಸಾ ಖಾನ್ ಜೀವ ಬೆದರಿಕೆಗೆ ಒಳಗಾದ ಮಹಿಳೆ. ಸದ್ಯ ಅವರು ತಮಗೆ ರಕ್ಷಣೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಮೆಹ್ರುನ್ನೀಸಾ ಅವರು, ನಾನು ಗೋವುಗಳ ಸಂರಕ್ಷಣೆ ಮಾಡುತ್ತಿರುವೆ. ಹೀಗಾಗಿ ತಮ್ಮ ಪ್ರತಿಷ್ಠೆಗೆ ದಕ್ಕೆ ಉಂಟಾಗುತ್ತಿದೆ ಎಂದು ಸಂಬಂಧಿಕರು ಅನೇಕ ಬಾರಿ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಜೀವ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಅಳಲು ತೊಡಿಕೊಂಡರು. ಇದನ್ನು ಓದಿ: ಆನ್‍ಲೈನ್ ನಲ್ಲಿ ನಿಮಗೆ ಬೇಕಾದ ತಳಿಯ ಹಸುಗಳನ್ನು ಖರೀದಿಸಿ!- ಏನಿದರ ವಿಶೇಷತೆ?

ಗೋವುಗಳ ರಕ್ಷಣೆಗೆ ಸೇರಿದಾಗಿನಿಂದ ಹಾಗೂ ತ್ರಿವಳಿ ತಲಾಖ್ ವಿರುದ್ಧ ಧ್ವನಿ ಎತ್ತಿದ್ದರಿಂದ ನನ್ನ ತಾಯಿ, ಮಗಳು ಭಾರೀ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಸಂಬಂಧಿಕರು ನನಗೆ ಥಳಿಸಿದ್ದು, ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಮೂರು ತಿಂಗಳ ಹಿಂದೆಯೇ ಪೊಲೀಸರ ಸಹಾಯವನ್ನು ಕೇಳಿದ್ದೆ. ಸದ್ಯ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದರಿಂದ ರಕ್ಷಣೆ ನೀಡುವಂತೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿರುವೆ ಎಂದು ಅವರು ಹೇಳಿದರು.

ನೀಮುಚ್ ನಗರದಿಂದ 500 ಮೀ. ದೂರದಲ್ಲಿ ಗೋಶಾಲೆ ನಡೆಸಲಾಗುತ್ತಿದೆ. ಗೋವುಗಳ ರಕ್ಷಣೆ ನಮ್ಮ ಗೌರವಕ್ಕೆ ದಕ್ಕೆ ತರುತ್ತದೆ. ಹೀಗಾಗಿ ಈ ಕಾರ್ಯವನ್ನು ಕೈಬಿಡುವಂತೆ ಸಂಬಂಧಿಕರು ಒತ್ತಾಯಿಸುತ್ತಿದ್ದಾರೆ. ಆದರೆ ಪ್ರಾಣಿಗಳ ರಕ್ಷಣೆ ನಮ್ಮ ಗೌರವಕ್ಕೆ ಹೇಗೆ ಧಕ್ಕೆ ತರುತ್ತದೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *