ಮನೆಗೆ ಹೋಗಿ ಬಚ್ಚಿಕೊಂಡ್ರೂ, ಬಾಗಿಲು ಮುರಿದು ಯುವಕನ ಕೊಚ್ಚಿ ಕೊಲೆಗೈದ್ರು!

ಬೆಂಗಳೂರು: ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಬಹದ್ದೂರ್ ಪುರದಲ್ಲಿ ನಡೆದಿದೆ.

24 ವರ್ಷದ ಲೋಕನಾಥ್ ಹತ್ಯೆಯಾದ ಯುವಕ. ಶುಕ್ರವಾರ ರಾತ್ರಿ 12.30ಕ್ಕೆ ಸುಮಾರಿಗೆ ಹೇಮಂತ್ ಮತ್ತು ಹರೀಶ್ ಎಂಬವರ ಗುಂಪು ಲೋಕನಾಥ್‍ನನ್ನು ಮಾತನಾಡೋಣ ಎಂದು ಕರೆದುಕೊಂಡು ಹೋಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆ ವಿವರ:
ಮೃತ ಲೋಕನಾಥ್ ಮತ್ತು ಆರೋಪಿಗಳಾದ ಹೇಮಂತ್ ಮತ್ತು ಹರೀಶ್ ಗುಂಪಿನ ಮಧ್ಯೆ ಒಂದು ವಾರದ ಹಿಂದೆ ಸಣ್ಣ-ಪುಟ್ಟ ವಿಚಾರಗಳಿಗೆ ಗಲಾಟೆ ನಡೆದಿತ್ತು. ಬಳಿಕ ಎರಡೂ ಗುಂಪುಗಳನ್ನು ಪೊಲೀಸರು ಕರೆಸಿ ಮಾತನಾಡಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೂ ಲೋಕನಾಥ್‍ನನ್ನು ಕೊಲೆ ಮಾಡಲು ಹೇಮಂತ್ ಗುಂಪು ಪ್ಲಾನ್ ಮಾಡಿತ್ತು.

ಶುಕ್ರವಾರ ಆನೇಕಲ್‍ನಲ್ಲಿ ಜಾತ್ರೆ ನಡೆಯುತ್ತಿತ್ತು. ಈ ವೇಳೆ ಹೇಮಂತ್ ಮತ್ತು ಹರೀಶ್ ಗುಂಪು ಮಾತನಾಡಬೇಕು ಎಂದು ಲೋಕನಾಥ್‍ನನ್ನು ಗ್ರೌಂಡ್‍ಗೆ ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗಿದ್ದರು. ಮೃತ ಲೋಕನಾಥ್ ಜೊತೆ ಇಬ್ಬರು ಸ್ನೇಹಿತರು ಹೋಗಿದ್ದು, ಈ ವೇಳೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ಲೋಕನಾಥ್ ಮೇಲೆ ಹಲ್ಲೆ ಮಾಡಿದ್ದಾರೆ.

ಲೋಕನಾಥ್ ಜೊತೆ ಬಂದಿದ್ದ ಇಬ್ಬರು ಸ್ನೇಹಿತರು ಹಲ್ಲೆ ಮಾಡಿದವರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಇತ್ತ ಲೋಕನಾಥ್ ಕೂಡ ಹಲ್ಲೆಕೋರರಿಂದ ತಪ್ಪಿಸಿಕೊಂಡು ಅಲ್ಲೆ ಪಕ್ಕದಲ್ಲಿದ್ದ ಮನೆಗೆ ನುಗ್ಗಿದ್ದಾನೆ. ಆದರೂ ಆರೋಪಿಗಳು ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಮಾಹಿತಿ ತಿಳಿದ ಆನೇಕಲ್ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *