ಹಸ್ತಿನಾಪುರ ಸಾರ್ವಭೌಮನ ಧಗಧಗಿಸುವ ಕುರುಕ್ಷೇತ್ರದ ಎರಡನೇ ಟ್ರೈಲರ್ ಔಟ್

ಬೆಂಗಳೂರು: ಚಂದನವನ ಬಹುನಿರೀಕ್ಷಿತ ಸಿನಿಮಾ ‘ಮುನಿರತ್ನ ಕುರುಕ್ಷೇತ’ ಚಿತ್ರದ ಎರಡನೇ ಟ್ರೈಲರ್ ಇಂದು ಮಧ್ಯಾಹ್ನ 2 ಗಂಟೆಗೆ ಬಿಡುಗಡೆಯಾಗಿದೆ. ಝಗಮಗಿಸುವ ಟ್ರೈಲರ್ ನಲ್ಲಿ ಹಸ್ತಿನಾಪುರ ಸಾರ್ವಭೌಮನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಡಕ್ ಡೈಲಾಗ್ ಮೂಲಕ ಮಿಂಚಿದ್ದಾರೆ.

ಈ ಬಾರಿಯ ಟ್ರೈಲರ್ ವಿಶೇಷತೆಗಳ ಆಗರವಾಗಿದ್ದು, ಚಿತ್ರದ ಬಹುತೇಕ ಪಾತ್ರಗಳನ್ನು ಡೈಲಾಗ್ ಮೂಲಕ ಪರಿಚಯಿಸಲಾಗಿದೆ. ಮಹಾಭಾರತದ ಕಥೆಯನ್ನೊಳಗೊಂಡಿರುವ ಸಿನಿಮಾದ ಝಲಕ್ ನೋಡುಗರಿಂದ ‘ವಾವ್’ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಪೌರಾಣಿಕ ಕಥೆ ಆಗಿದ್ದರಿಂದ ಸಿನಿಮಾ ಸಹ ಅದ್ಧೂರಿತನದಿಂದ ತುಂಬಿ ತುಳುಕುತ್ತಿದೆ. ಆರಂಭದಲ್ಲಿಯೇ ರೆಬೆಲ್ ಸ್ಟಾರ್ ಅಂಬರೀಶ್ ಎಂಟ್ರಿಯಾಗುತ್ತಲೇ ಅಂಬಿ ಅಭಿಮಾನಿಗಳು ರೋಮಾಂಚನಗೊಳ್ಳುವಂತೆ ಮಾಡುವಲ್ಲಿ ಟ್ರೈಲರ್ ಯಶಸ್ಸು ಕಂಡಿದೆ.

ಕರ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ, ಶಲ್ಯನಾಗಿ ರಾಕ್‍ಲೈನ್ ವೆಂಕಟೇಶ್, ಅಭಿಮನ್ಯುವಿನಾಗಿ ನಿಖಿಲ್, ಶಕುನಿಯಾಗಿ ರವಿಶಂಕರ್, ದ್ರೌಪದಿಯಾಗಿ ಸ್ನೇಹ, ಅರ್ಜುನನಾಗಿ ಸೋನು ಸೂದ್, ಶ್ರೀಕೃಷ್ಣನಾಗಿ ರವಿಚಂದ್ರನ್ ಸೇರಿದಂತೆ ಚಿತ್ರದ ಬಹುತೇಕ ಪಾತ್ರಗಳನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ.

ಮಹಾಭಾರತ ಕೇಂದ್ರಿಕೃತವಾದ ಸಿನಿಮಾ ಇದಾಗಿದ್ದರಿಂದ ದ್ರೌಪದಿಯ ವಸ್ತ್ರಾಪಹರಣ, ಸೋದರರ ಪಗಡೆ ಸೋಲು, ಕರ್ಣನ ಸ್ನೇಹ, ಅಭಿಮನ್ಯುವಿನ ಸಾಹಸ, ಶಕುನಿಯ ಕುತಂತ್ರ, ಶ್ರೀಕೃಷ್ಣನ ಧರ್ಮದ ಆಟ, ಭೀಮನ ಗದಾಯುದ್ಧ ಸನ್ನಿವೇಶಗಳು ಟ್ರೈಲರ್ ನೋಡುಗರನ್ನು ಪೌರಾಣಿಕ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಉರಗ ಪತಾಕೆಯುಳ್ಳ ಕೌರವೇಂದ್ರ ಯುದ್ಧಕ್ಕೆ ಪ್ರವೇಶಿಸುವ ಸನ್ನಿವೇಶ ಚಿತ್ರದ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹೀಗೆ 2 ನಿಮಿಷದ 17 ಸೆಕೆಂಡ್ ಟ್ರೈಲರ್ ಮಹಾಭಾರತದ ವೈಭವೀಕರಣದ ಝಲಕ್ ಕರುನಾಡಿನ  ಮುಂದಿಟ್ಟಿದ್ದು ಪ್ರೇಕ್ಷಕರು ಫಿದಾ ಆಗಿದ್ದಾರೆ.

ದರ್ಶನ್ ಅವರ ಫೇಸ್‍ಬುಕ್ ಖಾತೆಯಲ್ಲಿ ಎರಡನೇ ಟ್ರೈಲರ್ ಬಿಡುಗಡೆಗೊಂಡಿದೆ. ಬಿಡುಗಡೆಗೊಂಡ ಎರಡು ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ವ್ಯೂವ್, 9 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ನೋಡುಗರು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿ, ಚಿತ್ರ ನೋಡಲು ಕಾತುರರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಕುರುಕ್ಷೇತ್ರ ಮುನಿರತ್ನ ಅವರು ಮಹತ್ವಾಕಾಂಕ್ಷೆಯಿಂದ ನಿರ್ಮಾಣ ಮಾಡಿರುವ ಚಿತ್ರ. ಬಹು ಕೋಟಿ ವೆಚ್ಚ ಮತ್ತು ಅದ್ಧೂರಿ ತಾರಾಗಣ ಹೊಂದಿರೋ ಕುರುಕ್ಷೇತ್ರ ಕನ್ನಡ ಮಾತ್ರವಲ್ಲದೇ ಪರರಾಜ್ಯ, ವಿದೇಶಗಳಲ್ಲಿಯೂ ಅಬ್ಬರಿಸಲು ಅಣಿಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಆಗಸ್ಟ್ 2ರಂದು ಬಿಡುಗಡೆಯಾಗಲಿದೆ.

https://www.facebook.com/NimmaPreethiyaDasaDarshan/videos/722220364861886/

Comments

Leave a Reply

Your email address will not be published. Required fields are marked *