ಲಾಕ್‍ಡೌನ್ ಉಲ್ಲಂಘಿಸಿದವರಿಗೆ 3 ದಿನ ಜೈಲು, 500 ರೂ. ದಂಡ

– ಮೊದಲನೇ ಬಾರಿ ಲಾಕ್‍ಡೌನ್ ಪಾಲಿಸದ್ದಕ್ಕೆ ಶಿಕ್ಷೆ
– ಮನೆಯಿಂದ ಹೊರಬಂದವರಿಗೆ ಶಿಕ್ಷೆ

ಮುಂಬೈ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ವಿಧಿಸಿದ ಲಾಕ್‍ಡೌನ್‍ಅನ್ನು ಉಲ್ಲಂಘಿಸಿದ್ದಕ್ಕಾಗಿ ಮಹಾರಾಷ್ಟ್ರದ ಬಾರಾಮತಿ ನ್ಯಾಯಾಲಯವು ಮೂವರಿಗೆ ಮೂರು ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಕೊರೊನಾ ವೈರಸ್ ಭೀತಿಯಿಂದ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಜನರನ್ನು ಯಾರು ಹೊರಗೆ ಬರಬೇಡಿ ಎಂದು ಸೂಚಿಸಿದ್ದರೂ ಕೆಲವರು ಹೊರಗೆ ಬಂದು ಪೊಲೀಸರು ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹೊರಗೆ ಬಂದ ಮೂವರಿಗೆ ಬಾರಾಮತಿ ಕೋರ್ಟ್ ಇದೇ ಮೊದಲ ಬಾರಿಗೆ ಲಾಕ್‍ಡೌನ್ ನಿಯಮವನ್ನು ಪಾಲಿಸದೆ ಇದ್ದಕ್ಕೆ ಶಿಕ್ಷೆ ನೀಡಿದೆ.

ಲಾಕ್‍ಡೌನ್ ಉಲ್ಲಂಘಿಸಿದಕ್ಕೆ ಆರೋಪಿಗಳಾದ ಅಫ್ಜಲ್ ಅತ್ತಾರ್ (39), ಚಂದ್ರಕುಮಾರ್ ಷಾ (38) ಮತ್ತು ಅಕ್ಷಯ್ ಷಾ (32)ಗೆ ಬಾರಾಮತಿ ನ್ಯಾಯಾಲಯದ ನ್ಯಾಯಾಧೀಶ ಜೆ.ಜೆ.ಬಚುಲ್ಕರ್ ಅವರು, ಮೂರು ದಿನಗಳ ಜೈಲು ಶಿಕ್ಷೆ ಮತ್ತು ತಲಾ 500 ರೂ.ಗಳ ದಂಡ ಪಾವತಿಸಬೇಕೆಂದು ಬುಧವಾರ ಆದೇಶಿಸಿದ್ದಾರೆ. ಈ ಮೂಲಕ ಲಾಕ್‍ಡೌನ್ ಪಾಲಿಸದವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಬಾರಾಮತಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಶಿರ್ಗಾಂವ್ಕರ್, ಈ ಮೂವರು ಆರೋಪಿಗಳನ್ನು ಯಾವುದೇ ಕಾರಣವಿಲ್ಲದೆ ಪುಣೆ ಜಿಲ್ಲೆಯ ಬಾರಾಮತಿ ನಗರದಲ್ಲಿ ಓಡಾಡುತ್ತಿದ್ದು ಕಂಡುಬಂದ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರ ವಿರುದ್ಧ ಸಿಆರ್‍ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *