ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಇನ್ನೆರಡು ದಿನ ಜೈಲೇ ಗತಿ

ARYAN

ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ. ಬುಧವಾರ ಮಧ್ಯಾಹ್ನದ ಬಳಿಕ ಸುದೀರ್ಘ ವಿಚಾರಣೆ ನಡೆಯಲಿದೆ.

ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಸೆಷನ್ಸ್ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿ.ವಿ ಪಾಟೀಲ್ ತನಿಖಾ ವರದಿ ಸಲ್ಲಿಸಲು ಎನ್‍ಸಿಬಿ(NCB) ಕಾಲಾವಕಾಶ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ವಾದ ಆರಂಭಿಸಿದ ಎನ್‍ಸಿಬಿ(NCB) ಪರ ವಕೀಲರು, ತನಿಖಾ ವರದಿ ಸಲ್ಲಿಸಲು ಒಂದು ವಾರದ ಸಮಯ ಬೇಕು ಈ ಹಿನ್ನೆಲೆ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಆದರೆ ಎನ್‍ಸಿಬಿ(NCB) ವಾದಕ್ಕೆ ಆರ್ಯನ್ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ದೇಸಾಯಿ ಮತ್ತು ವಕೀಲ ಸತೀಶ್ ಮನೇಶಿಂಧೆ ಆಕ್ಷೇಪ ವ್ಯಕ್ತಪಡಿಸಿ, ಒಂದು ವಾರದ ಸಮಯ ಸಾಧ್ಯವಿಲ್ಲ ಕೂಡಲೇ ವಿಚಾರಣೆ ಆರಂಭಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್

ಆರ್ಯನ್ ಖಾನ್ ಪರ ವಕೀಲರ ಆಕ್ಷೇಪ ಹಿನ್ನೆಲೆ ಕನಿಷ್ಠ ಎರಡು ದಿನಗಳ ಕಾಲಾವಕಾಶ ಬೇಕು .ವಿಚಾರಣೆ ಗುರುವಾರ ನಡೆಸುವಂತೆ ಎನ್‍ಸಿಬಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಎಮ್ ಚಿಮಲ್ಕರ್ ಮನವಿ ಮಾಡಿದರು. ಬಳಿಕ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು ಬುಧವಾರ ಮಧ್ಯಾಹ್ನ ಬಳಿಕ ವಿಚಾರಣೆ ನಡೆಸೋಣ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ಸ್‌ ಕೇಸ್‌ – ಶಾರೂಖ್ ಪುತ್ರ ಆರ್ಯನ್ ಜೈಲುಪಾಲು

ವಿಚಾರಣೆ ವೇಳೆ ವಾದ ಮಂಡಿಸಿದ ಆರ್ಯನ್ ಖಾನ್ ಪರ ವಕೀಲರಾದ ಮನೇಶಿಂಧೆ ಮತ್ತು ದೇಸಾಯಿ, ಆರ್ಯನ್ ಖಾನ್ ನಿಂದ ಯಾವುದೇ ಕಾನೂನು ಬಾಹಿರ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ಜಾಮೀನು ನೀಡುವುದರಿಂದ ತನಿಖೆಗೆ ತೊಂದರೆಯಾಗುವುದಿಲ್ಲ ಎಂದರು. ಇನ್ನು ಕಳೆದ ಭಾನುವಾರದಿಂದ ಶುಕ್ರವಾರದವರೆಗೂ ಎನ್‍ಸಿಬಿ ಕಡ್ಡಿಯಲ್ಲಿ ಆರ್ಯನ್ ಇದ್ದು ಒಂದೇ ದಿನ ಮಾತ್ರ ಹೇಳಿಕೆ ಪಡೆಯಲಾಗಿದೆ ಎಂದು ವಾದಿಸಿದರು. ಇದನ್ನೂ ಓದಿ: ಕಿಂಗ್ ಖಾನ್ ಮಗನ ಡ್ರಗ್ಸ್ ಪ್ರಕರಣದಲ್ಲಿ ಕನ್ನಡಿಗನ ವಕಾಲತ್ತು 

ಇದಕ್ಕೆ ಉತ್ತರಿಸಿದ ಎನ್‍ಸಿಬಿ ವಕೀಲರು, ಆರ್ಯನ್ ಖಾನ್ ಪರ ವಕೀಲರ ವಾದವನ್ನು ತಿರಸ್ಕರಿಸಿದರು. ಆರ್ಯನ್ ಖಾನ್ ಸೇರಿ ಇತರೆ ಆರೋಪಿಗಳಿಗೆ ಪ್ರಕರಣದೊಂದಿಗ ನಂಟಿದೆ. ಈ ಹಿನ್ನೆಲೆ ಅವರು ಜಾಮೀನು ನೀಡಬಾರದು. ಅಲ್ಲದೆ ಇದಕ್ಕೂ ಮುನ್ನ ಎಲ್ಲ ಅರ್ಜಿಗಳನ್ನು ಪ್ರತ್ಯೇಕ ವಿಚಾರಣೆ ನಡೆಸಬೇಕು ಎಂದಿದ್ದು ಮತ್ತೊರ್ವ ಆರೋಪಿಯ ಮನವಿಗೂ ಎನ್‍ಸಿಬಿ ವಿರೋಧ ವ್ಯಕ್ತಪಡಿಸಿತು.

Comments

Leave a Reply

Your email address will not be published. Required fields are marked *