ರಾಜಕೀಯಕ್ಕಾಗಿ ಜಾತಿ ಬಳಕೆ ಸರಿಯಲ್ಲ- ಜೆಡಿಎಸ್‍ಗೆ ತಿವಿದ ಸಿದ್ದರಾಮಯ್ಯ ಆಪ್ತ

ಚಿಕ್ಕಬಳ್ಳಾಪುರ: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೌಡ್ತಿಯಲ್ಲ ನಾಯ್ಡು ಎಂದು ಸಂಸದ ಶಿವರಾಮೇಗೌಡ ಮಾಡುತ್ತಿರುವ ಜಾತಿ ರಾಜಕೀಯಕ್ಕೆ ಸಚಿವ ಎಂಟಿಬಿ ನಾಗರಾಜ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್, ಮದುವೆಯಾಗಿ ಇಬ್ಬರು ವಿಲೀನವಾಗಿ ಒಂದು ಗಂಡು ಮಗುವಾದ ಮೇಲೆ ಪತಿಯ ಜಾತಿಯೇ ಪತ್ನಿಗೆ ಬರುತ್ತೆ ಹೊರೆತು ಬೇರೆ ಜಾತಿಯಲ್ಲ. ರಾಜಕೀಯದಲ್ಲಿ ಯಾವತ್ತೂ ಜಾತಿಯನ್ನು ತರದೆ ತಮ್ಮ ಸರ್ಕಾರದ ಸಾಧನೆಗಳನ್ನಿಡಿದು ಜನರ ಮುಂದೆ ಮತಯಾಚನೆ ಮಾಡಬೇಕು ಎಂದು ಶಿವರಾಮೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಲವರು ಜನರ ಭಾವನೆಗಳನ್ನು ಕೆರಳಿಸುವ ನಿಟ್ಟಿನಲ್ಲಿ ಈ ರೀತಿ ಜಾತಿ ರಾಜಕೀಯವನ್ನು ಮಾಡಲು ಮುಂದಾಗಿದ್ದು, ಯಾರೊಬ್ಬರೂ ಜಾತಿ ರಾಜಕೀಯ ಮಾಡಲು ಮುಂದಾಗಬಾರದು ಎಂದು ಸಲಹೆ ನೀಡಿದರು. ಈ ಬಾರಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದು, ಸರ್ಕಾರದ ಸಾಧನೆಗಳನ್ನು ಹೇಳಿ ಕೈ ಮುಗಿದು ಜನರ ಮುಂದೆ ಮತಯಾಚನೆ ಮಾಡಬೇಕು ಎಂದರು.

ಶಿವರಾಮೇಗೌಡ ಹೇಳಿದ್ದೇನು?
ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ಅಂಬರೀಶ್ ನಮ್ಮ ಗೌಡ್ರು ಓಕೆ, ಆದ್ರೆ ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ಬಿಟ್ಟು ಜಾತಿಯವರನ್ನ ಮದುವೆ ಆದ ಮೇಲೆ ಹೇಗೆ ಗೌಡ್ತಿ ಆಗುತ್ತಾರೆ ಎಂದು ಶಿವರಾಮೇಗೌಡ ಪ್ರಶ್ನೆ ಮಾಡಿದ್ದರು. ನಮ್ಮ ಸಿಎಂ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ದರೂ ಕೂಡ ಇಲ್ಲ ಸಲ್ಲದ ಆರೋಪ ಮಾಡಿದ್ರೆ ಕೈ ಕಟ್ಟಿ ಕುಳಿತು ಕೊಳ್ಳಲು ಆಗುತ್ತಾ? ನಾನು ಗೌಡ್ತಿ- ಗೌಡ್ತಿ ಅಂದರೆ, ಯಾವ್ ರೀತಿ ಗೌಡ್ತಿ ಹೇಳಬೇಕಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *