ಸಿದ್ದರಾಮಯ್ಯ ಪುತ್ರ ಸಾವನ್ನಪ್ಪಲು ಭೈರತಿ ಸುರೇಶ್ ಕಾರಣ- ಎಂಟಿಬಿ

-ಜೆಡಿಎಸ್‍ನಲ್ಲಿ ಮದ್ವೆಯಾದವರದ್ದು ಕಾಂಗ್ರೆಸ್‍ನಲ್ಲಿ ಸಂಸಾರ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಾವನ್ನಪ್ಪಲು ಭೈರತಿ ಸುರೇಶ್ ನೇರ ಕಾರಣ. ರಾಕೇಶ್ ಅವರನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್ ಎಂಬ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ ಕೈ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೈರತಿ ಸುರೇಶ್ ಬಡ್ಡಿ ವಸೂಲಿ ಆರೋಪಕ್ಕೆ ಎಂಟಿಬಿ ತಿರುಗೇಟು ನೀಡಿದ್ದಾರೆ. ರಾಜಕೀಯದಲ್ಲಿ ಅವನು ಬಚ್ಚಾ, ಆತನ ಬಂಡವಾಳ ನನಗೆ ಗೊತ್ತು. ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್. ಇನ್ನೂ ನೂರು ವರ್ಷ ಬದುಕಿ ಬಾಳಬೇಕಿದ್ದವನನ್ನು ಸಾಯಿಸಿದ್ದು ನನಗೆ ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್‍ನಲ್ಲಿ ಸಂಸಾರ:
ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಹೊರಿಸಿರುವ ಆರೋಪ ಶುದ್ಧ ಸುಳ್ಳು. ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಬರುವ ಮುನ್ನವೇ ನಾನು ಶಾಸಕನಾಗಿದ್ದೆ. ಎಸ್.ಎಂ.ಕೃಷ್ಣ ನನಗೆ ಟಿಕೆಟ್ ನೀಡಿದ್ದು, ಸಿದ್ದರಾಮಯ್ಯ ಅಲ್ಲ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕನಿಗೂ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ. ಎಲ್ಲರ ಬಂಡವಾಳ ನನಗೆ ಗೊತ್ತಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕುರುಬರನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ, ರಮೇಶ್ ಕುಮಾರ್, ಕೃಷ್ಣಬೈರೇಗೌಡ ಯಾವ ಪಕ್ಷದಿಂದ ಬಂದಿದ್ದಾರೆ, ಇವರೆಲ್ಲ ಜೆಡಿಎಸ್‍ನಲ್ಲಿ ಮದುವೆಯಾಗಿ ಕಾಂಗ್ರೆಸ್‍ಗೆ ಬಂದು ಸಂಸಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದಿನೇಶ್ ಗುಂಡೂರಾವ್ ದುರ್ಬಲ ಅಧ್ಯಕ್ಷ. ಅವರು ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ನೆಲ ಕಚ್ಚುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಸೀಟು ಗೆಲ್ಲಿಸಿದ್ದಾರೆ. ರಾಷ್ಟ್ರದಲ್ಲಿ 40 ಸೀಟ್ ಗೆದ್ದಿರುವ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರಲು ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಒಂದು ಸೀಟ್ ಗೆದ್ದ ಇತಿಹಾಸ ಕಾಂಗ್ರೆಸ್‍ಗೆ ಇರಲಿಲ್ಲ. ಮುಂಚೂಣಿ ನಾಯಕರಿಂದಲೇ ಕಾಂಗ್ರೆಸ್ ಹಾಳಾಗಿ ಸೋತು ಸುಣ್ಣವಾಗಿದೆ. ದೇಶದಲ್ಲೂ ಕಾಂಗ್ರೆಸ್ ಇಲ್ಲ, ರಾಜ್ಯದಲ್ಲೂ ಕಾಂಗ್ರೆಸ್ ಇಲ್ಲ. ದಿನೇಶ್ ಗೂಂಡೂರಾವ್‍ರಿಂದ ಕಾಂಗ್ರೆಸ್‍ಗೆ ಈ ದುರ್ಗತಿ ಬಂದಿದೆ ಎಂದು ಹರಿಹಾಯ್ದರು.

Comments

Leave a Reply

Your email address will not be published. Required fields are marked *