ಗೋಡ್ಸೆ ಒಬ್ಬರನ್ನು ಕೊಂದ್ರೆ ರಾಜೀವ್ ಕೊಂದಿದ್ದು 17 ಸಾವಿರ – ಕ್ಷಮೆ ಕೇಳಿದ ಕಟೀಲ್

ಬೆಂಗಳೂರು: ನಾಥುರಾಂ ಗೋಡ್ಸೆ ಕುರಿತು ಮಾಡಿದ್ದ ಟ್ವೀಟ್ ಅನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ.

ನಾಥುರಾಂ ಗೋಡ್ಸೆ ಕೊಂದವರ ಸಂಖ್ಯೆ 1 ಆದರೆ ಉಗ್ರ ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72 ಹಾಗೂ ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17 ಸಾವಿರ. ಈಗ ನೀವೇ ಹೇಳಿ. ಇವರಲ್ಲಿ ಯಾರು ಅತೀ ಕ್ರೂರ ಕೊಲೆಗಾರ ಎಂದು ಪ್ರಶ್ನೆ ಮಾಡಿ ಸಂಸದರು ಟ್ವೀಟ್ ಮಾಡಿದ್ದರು.

ಈ ಟ್ವೀಟ್‍ಗೆ ಪ್ರತಿಕ್ರಿಯೆಗಳು ಬರತೊಡಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಂಸದರು, ‘ನನ್ನ ಕೊನೆಯ ಎರಡು ಟ್ವೀಟ್ ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ’ ಎಂದು ಬರೆದುಕೊಂಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ರಾಜೀವ್ ಗಾಂಧಿ 17 ಸಾವಿರ ಜನರನ್ನ ಕೊಂದಿದ್ದಾರೆ ಎಂಬ ಕಟೀಲ್ ಅವರ ಟ್ವೀಟ್‍ಗೆ ಕಿಡಿಕಾರಿದ್ದರು. ಬಿಜೆಪಿ ನಾಯಕರ ಇಂತಹ ಮಾತುಗಳಿಂದ ಅವರ ಮನಸಿತ್ಥಿ ಹೇಗಿದೆ ಎಂಬುವುದು ತಿಳಿಯುತ್ತದೆ. ರಾಜೀವ್ ಗಾಂಧಿ ಅವರು ಈ ದೇಶದಲ್ಲಿ ಐಕ್ಯತೆಗಾಗಿ ತಮ್ಮ ಪ್ರಾಣ ಕೊಟ್ಟಿದ್ದಾರೆ. ನಳಿನ್ ಕುಮಾರ್ ಅವರಂತೆ ಹೇಳಿಕೆ ನೀಡುವ ಸಜ್ಜನರ ಸಂಖ್ಯೆ ಹಾಗೂ ವಿಚಾರಧಾರೆ ಹೆಚ್ಚಾಗುತ್ತಿರುವುದ್ದರಿಂದ ದೇಶಕ್ಕೆ ತೊಂದರೆ ಆಗುತ್ತಿದೆ. ಇನ್ನು ಮುಂದೆ ಆದರೂ ನಾಲಿಗೆ ಬಿಗಿ ಹಿಡಿದು ಮಾತನಾಡಲು ಕಲಿಯಬೇಕು ಎಂದು ವಾಗ್ದಾಳಿ ನಡೆಸಿದರು.

ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅಂತವರನ್ನ ಕೊಂದವರನ್ನ ಬಿಜೆಪಿಯವರು ದೇವರಂತೆ ಪೂಜೆ ಮಾಡುತ್ತಿದ್ದಾರೆ. ಗಾಂಧೀಜಿ ಅವರನ್ನ ರಾಷ್ಟ್ರಪಿತ ಮನ್ನಣೆ ಕೊಟ್ಟು ಪ್ರಧಾನಿ ಮೋದಿ ಅವರ ಸಮಾಧಿ ಮುಂದೆ ತಲೆ ಬಾಗುತ್ತದೆ. ಮತ್ತೊಂದೆಡೆ ಬಿಜೆಪಿಯವರು ಈ ರೀತಿ ಮಾತನಾಡುತ್ತಾರೆ ಎಂದು ಟೀಕಿಸಿದರು. ಇದನ್ನು ಓದಿ: ಇಂದು ನಡೆಯುತ್ತಿರುವ ಚರ್ಚೆಯಿಂದ ಗೋಡ್ಸೆ ಸಂತೋಷ ಪಡಬಹುದು: ಹೆಗ್ಡೆ

Comments

Leave a Reply

Your email address will not be published. Required fields are marked *