ರೈಲ್ವೆ ಸಚಿವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ

ಶಿವಮೊಗ್ಗ: ಜಿಲ್ಲೆಯ ಕೋಟೆಗಂಗೂರು ಬಳಿ ನಿರ್ಮಾಣವಾಗುತ್ತಿರುವ ಕೋಚಿಂಗ್ ಡಿಪೋಗೆ ಅನುದಾನ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಸಂಸದ ಬಿ.ವೈ ರಾಘವೇಂದ್ರ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಸಚಿವ ಗೋಯಲ್ ಅವರನ್ನು ಭೇಟಿಯಾದ ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆಗೆ ಸಂಬಂಧಪಟ್ಟಂತೆ ಆಗಬೇಕಾದ ಕಾಮಗಾರಿಗಳು, ಅಭಿವೃದ್ಧಿ ಯೋಜನೆಗಳ ಬಗ್ಗೆ ಸಚಿವರ ಗಮನ ಸೆಳೆದರು.

ಶಿವಮೊಗ್ಗ – ಶಿಕಾರಿಪುರ – ರಾಣಿಬೆನ್ನೂರು ಹೊಸ ರೈಲ್ವೆ ಯೋಜನೆಗೆ ಸಿವಿಲ್ ಕಾಮಗಾರಿ ಆರಂಭಿಸುವಂತೆ ಕೋರಿದರು. ಶಿವಮೊಗ್ಗ – ಬೀರೂರು ಮಧ್ಯೆ ಡಬ್ಲಿಂಗ್ ಕಾಮಗಾರಿ, ವಾರದಲ್ಲಿ ಒಂದು ದಿನ ಸಂಚರಿಸುತ್ತಿರುವ ಶಿವಮೊಗ್ಗ – ರೇಣುಗುಂಟ ಹಾಗೂ ಶಿವಮೊಗ್ಗ – ಚೆನ್ನೈ ಮಧ್ಯೆ ರೈಲನ್ನು ನಿತ್ಯ ಓಡಿಸಬೇಕು. ಯಶವಂತಪುರ – ಶಿವಮೊಗ್ಗ – ಯಶವಂತಪುರ ರೈಲು ವಾರದಲ್ಲಿ ಮೂರು ದಿನ ಪ್ರಯಾಣಿಸುತ್ತಿದ್ದು, ಅದನ್ನು ಸಹ ನಿತ್ಯ ಓಡಿಸಬೇಕು ಎಂದರು.

ಜೊತೆಗೆ ಪ್ರಸಿದ್ಧ ದೇವಸ್ಥಾನವಾದ ಕೊಲ್ಲೂರು ಮೂಕಾಂಬಿಕೆಯಲ್ಲಿ ರೈಲು ನಿಲುಗಡೆ ಮಾಡಬೇಕು. ಇದರಿಂದ ಸಾವಿರಾರು ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *