ಸ್ವಂತ ಖರ್ಚಲ್ಲಿ ಬೋರ್ ಕೊರೆಸಿ ಜಾನುವಾರುಗಳ ನೀರಿನ ದಾಹ ತಣಿಸ್ತಿರೋ ಯಾದಗಿರಿಯ ಮೆಕ್ಯಾನಿಕ್

ಯಾದಗಿರಿ: ಯರಗೋಳ ಗ್ರಾಮದ ಗೋವುಗಳು ಭೀಕರ ಬರಗಾಲದಲ್ಲಿ ಕುಡಿಯುವ ನೀರಿಗಾಗಿ ಕಷ್ಟಪಡುತ್ತಿವೆ. ವೃತ್ತಿಯಲ್ಲಿ ಮೋಟರ್ ಸೈಕಲ್ ಮೆಕ್ಯಾನಿಕ್, ಪ್ರವೃತ್ತಿಯಲ್ಲಿ ರೈತರಾಗಿರೋ ಗ್ರಾಮದ ನಿವಾಸಿ ಅಬ್ದುಲ್ ಗಫೂರಸಾಬ್ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್‍ವೆಲ್ ಕೊರೆಸಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಗಫೂರಸಾಬ್ ಅವರು ಯಾದಗಿರಿ ನಗರದಲ್ಲಿ ವಾಸವಿದ್ದು, ದ್ವಿಚಕ್ರ ವಾಹನಗಳ ರಿಪೇರಿ ಮಾಡುವ ಅಂಗಡಿ ಇಟ್ಟುಕೊಂಡಿದ್ದಾರೆ. ತಮ್ಮ ಸ್ವಗ್ರಾಮ ಯರಗೋಳದಲ್ಲಿ 3 ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಕೂಡಾ ಮಾಡುತ್ತಾರೆ. ಆದ್ರೆ ಒಂದೇ ಒಂದು ಜಾನುವಾರು ಸಾಕದಿದ್ದರೂ ಈ ಬಾರಿಯ ಭೀಕರ ಬರದ ಬೇಗುದಿಯಿಂದ ಜಾನುವಾರುಗಳು ನೀರಿಲ್ಲದೆ ಪರಿತಪಿಸುವುದನ್ನು ಅರಿತು, ತಮ್ಮ ಜಮೀನಿನಲ್ಲಿ ಸುಮಾರು 50 ಸಾವಿರ ರೂಪಾಯಿ ಖರ್ಚುಮಾಡಿ ಬೋರ್ ಕೊರೆಸಿದ್ದಾರೆ. ಜಾನುವಾರುಗಳಿಗೆ ನೀರು ಕುಡಿಯಲು ಅನೂಲವಾಗುವಂತೆ 22 ಬೈ 15 ಅಡಿ ಅಳತೆಯ ಕೊಳ ನಿರ್ಮಿಸಿದ್ದಾರೆ. ಈಗ ನೀರಿನ ಕೊಳ ನೋಡಿಕೊಳ್ಳಲು ವ್ಯಕ್ತಿಯೊಬ್ಬರನ್ನು ನೇಮಿಸಿದ್ದಾರೆ. ಎರಡು ದಿನಕ್ಕೊಮ್ಮೆ ಯಾದಗಿರಿಯಿಂದ ಯರಗೋಳಕ್ಕೆ ಹೋಗಿ ನೀರಿನ ನಿಗಾ ವಹಿಸುತ್ತಾರೆ.

ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿ ನೀರಿಲ್ಲದೆ ಜಾನುವಾರುಗಳು ಕಸಾಯಿಖಾನೆಗೆ ಹೋಗುತ್ತಿರುವ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕಷ್ಟಪಡುತ್ತಿದೆ. ಈ ಸ್ಥಿತಿಯಲ್ಲಿ ಸಾಮನ್ಯ ರೈತ ಗಫೂರ್‍ಸಾಬ್ ಜಾನುವಾರುಗಳಿಗೆ ನೀರುಣಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

 

Comments

Leave a Reply

Your email address will not be published. Required fields are marked *