ಗಂಡ ಹಣ ಕೊಡದ್ದಕ್ಕೆ ಸಿಟ್ಟು- ಮಗುವನ್ನ ಸ್ಟೇಷನ್‍ನಲ್ಲೇ ಬಿಟ್ಟು ಹೋದ ತಾಯಿ!

ಕೊಪ್ಪಳ: ಮದುವೆಯಾಗಿ ಮಕ್ಕಳಾದ ಬಳಿಕ ಪತ್ನಿಗೆ ಹಣದ ಮೇಲೆ ವ್ಯಾಮೋಹ ಬಂದಿದೆ. ಪತಿ ಬಳಿ 2 ಲಕ್ಷ ರೂ. ಹಣಕ್ಕಾಗಿ ಪೀಡಿಸಿದ್ದಾಳೆ. ಆದರೆ ಪತಿ ಹಣ ನೀಡದೆ ಇದ್ದಾಗ ಹೆತ್ತ ಮಗುವನ್ನು ಪೊಲೀಸ್ ಠಾಣೆಗೆ ಬಂದು, ನಿನ್ನ ಮಗು ನೀನೇ ಇಟ್ಕೊ ಎಂದು ಬಿಟ್ಟು ಹೋಗಿರುವ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.

ಕಂಪ್ಲಿ ಮೂಲದ ಸಾಹಿತಿ ಮತ್ತು ಗಂಗಾವತಿಯ ದ್ವಾರಕ್ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಅವರಿಬ್ಬರ ಸುಖಸಂಸಾರಕ್ಕೆ ಒಂದು ಮುದ್ದಾದ ಗಂಡು ಮಗು ಕೂಡ ಹುಟ್ಟಿತ್ತು. ಆದರೆ ಅದ್ಯಾಕೋ ಏನೋ ಸಾಹಿತಿಗೆ ಹಣದ ವ್ಯಾಮೋಹ ಹೆಚ್ಚಾಗಿದೆ.

ಹಣಕ್ಕಾಗಿ ತನ್ನ ಪತಿಯನ್ನು ಪೀಡಿಸುತ್ತಿದ್ದಳು. ಆದರೆ ಒಮ್ಮಿಂದೊಮ್ಮೆಲೇ ಲಕ್ಷಾಂತರ ರೂಪಾಯಿ ಹಣ ಕೇಳಿದರೆ ಎಲ್ಲಿಂದ ತರೋದು ಎಂದು ಪತಿ ಹೇಳಿದ್ದಾರೆ. ಇದರಿಂದ ಸಿಟ್ಟಾದ ಪತ್ನಿ, ತನ್ನ ಮೂರು ತಿಂಗಳ ಹಸುಗೂಸನ್ನು ವಕೀಲರ ಜೊತೆ ಬಂದು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಬಿಟ್ಟು ಹೋಗಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ಬಿಟ್ಟು ಹೋದ ಮಗುವನ್ನು ಎತ್ತಿಕೊಂಡ ತಂದೆ ಏನು ಮಾಡೋದು ಎಂದು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಮೂರು ತಿಂಗಳ ಗಂಡು ಮಗುವಿಗೆ ಎದೆ ಹಾಲುಣಿಸಬೇಕಾದ ತಾಯಿನೇ ಕರುಣೆ ಇಲ್ಲದೆ ಬಿಟ್ಟು ಹೋಗಿದ್ದಾಳೆ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ಬಾಟಲಿ ಹಾಲು ಕುಡಿಸಿದ ತಂದೆ ದ್ವಾರಕ್, ತನಗಾದ ನೋವನ್ನು ಪೊಲೀಸರೊಂದಿಗೆ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಪತಿ ಮತ್ತು ಪತ್ನಿಯರ ಗಲಾಟೆಯಲ್ಲಿ ಮಗುವಿಗೆ ತಾಯಿ ಆರೈಕೆ ಸಿಗುತ್ತಿಲ್ಲ. ಮಗುವಿನ ತಂದೆ ಮಗುವನ್ನು ನಾನೇ ಸಾಕುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾರೆ.

Comments

Leave a Reply

Your email address will not be published. Required fields are marked *