ಆಸ್ಪತ್ರೆಗೆ ದಾಖಲಿಸಿದ್ದ 2 ವರ್ಷದ ಮಗುವನ್ನ ಕೊಂಡೊಯ್ದು ಕೊಂದೇಬಿಟ್ಳು ತಾಯಿ!

ಬೆಂಗಳೂರು: ಹೆತ್ತ ತಾಯಿಯೇ ತನ್ನ ಕರುಳ ಕುಡಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಅನ್ನಪೂರ್ಣ (2) ತಾಯಿಂದಲೇ ಕೊಲೆಯಾದ ಮಗು. ಆರೋಪಿ ತಾಯಿ ನಿವೇದಿತಾಗೆ 5 ವರ್ಷದ ಹಿಂದೆ ತನ್ನ ಮಾವ ಚಂದ್ರಶೇಖರನೊಂದಿಗೆ ಮದುವೆಯಾಗಿತ್ತು. ಅವಡದೇನಹಳ್ಳಿಯ ಗಂಡನ ಮನೆಯಲ್ಲಿ ವಾಸವಿದ್ದಳು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ಮಗುವನ್ನೇ ಕೊಂದಿದ್ದಾಳೆ.

ಒಂದೂವರೆ ವರ್ಷದಿಂದ ನಿವೇದಿತಾ ತನ್ನ ಅತ್ತೆಯ ಮಗ ಸತೀಶ್ ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇಬ್ಬರು ಎಲ್ಲಾದರು ಓಡಿಹೋಗಿ ಬೇರೆ ಸಂಸಾರ ಮಾಡಲು ನಿರ್ಧರಿಸಿದ್ದರು.

ಮಂಗಳವಾರ ಮಗು ಅನ್ನಪೂರ್ಣಾಗೆ ಹುಷಾರಿಲ್ಲ ಎಂದು ಆನೇಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ಸಂದರ್ಭವನ್ನು ಉಪಯೋಗಿಸಿಕೊಂಡ ನಿವೇದಿತಾ ಆಸ್ಪತ್ರೆಯಿಂದ ಮಗುವಿನೊಂದಿಗೆ ಸತೀಶ್ ಜೊತೆ ಬೈಕ್ ನಲ್ಲಿ ಪರಾರಿಯಾಗಿದ್ದಾಳೆ.

ಇತ್ತ ಆಸ್ಪತ್ರೆಗೆ ಬಂದ ಚಂದ್ರಶೇಖರ್ ಮಗು ಮತ್ತು ಹೆಂಡತಿ ಕಾಣದಿದ್ದಾಗ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಪರಿಶೀಲಿಸಿದಾಗ ನಿವೇದಿತಾ ಪ್ರಿಯಕರನೊಂದಿಗೆ ಪರಾರಿಯಾಗಿರುವುದು ಗೊತ್ತಾಗಿದೆ. ನಂತರ ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಅತ್ತಿಬೆಲೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸ್ ಮತ್ತು ಪತಿ ಮಗುವಿನ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಮಗುವನ್ನು ಕೊಂದು ಪೊದೆಯಲ್ಲಿ ಎಸೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮಗುವನ್ನು ಕೊಲೆ ಮಾಡಿದ್ದ ಸ್ಥಳಕ್ಕೆ ಹೋಗಿ ಮಗುವಿನ ಶವವನ್ನು ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇರಿಸಿದ್ದಾರೆ. ಸದ್ಯಕ್ಕೆ ಆನೇಕಲ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *