ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿಗೆ ಹೃದಯಾಘಾತ!

ಮಂಗಳೂರು: ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

50 ವರ್ಷದ ವಾರಿಜಾ ಮೃತ ದುರ್ದೈವಿ. ಇವರು ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪರ ಪತ್ನಿ.

ಇಂದು ವಾರಿಜಾ ಅವರ ಮಗಳ ಮದುವೆ ಉಪ್ಪಿನಂಗಡಿಯ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿತ್ತು. ಮಗಳ ಕೊರಳಿಗೆ ತಾಳಿ ಬೀಳುತ್ತಿದ್ದಂತೆಯೇ ವಾರಿಜಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಷ್ಟರಲ್ಲೇ ವಾರಿಜ ಮೃತಪಟ್ಟಿದ್ದಾರೆ.

ವಾರಿಜಾ- ತನಿಯಪ್ಪ ದಂಪತಿಗೆ ಒಬ್ಬಳೇ ಮಗಳು ನವ್ಯ. ಈಕೆಗೆ ಮೊಗ್ರು ಗ್ರಾಮದ ಕಂಚಿನಡ್ಕ ನಿವಾಸಿ ಆನಂದ ಎಂಬವರ ಜೊತೆ  ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಇಂದು ನವ್ಯಳ ವಿವಾಹದಲ್ಲಿ ತಾಯಿ ವಾರಿಜಾ ಸಂತೋಷದಿಂದಲೇ ಓಡಾಡುತ್ತಿದ್ದರು. ಅತಿಯಾದ ಸಂತೋಷ ಹಾಗೂ ಭಾವದ್ವೇಗದಿಂದಲೇ ವಾರಿಜಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ.

ವಧುವಿನ ತಾಯಿಯ ಮರಣದಿಂದಾಗಿ ಇದೀಗ ಮದುವೆ ಮನೆಯಲ್ಲಿ ಸೂತಕದ ಛಾಯೆ ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *