ತಾಯಿ, ಮಗಳು ನಾಪತ್ತೆ- ಪ್ರೀತಿಸುತ್ತಿದ್ದ ಯುವಕನಿಂದಲೇ ಕಿಡ್ನಾಪ್?

ಬೆಂಗಳೂರು: ಉತ್ತರಪ್ರದೇಶದಿಂದ ಬಂದು ಬೆಂಗಳೂರಿನಲ್ಲಿ ವಾಸವಾಗಿದ್ದ ಕುಟುಂಬದ ತಾಯಿ ಮತ್ತು ಮಗಳು ಏಕಾಏಕಿ ನಾಪತ್ತೆಯಾಗಿದ್ದು, ಪ್ರೀತಿಸಿದ ಯುವಕನೇ ಕಿಡ್ನಾಪ್ ಮಾಡಿರಬಹುದು ಎಂದು ಶಂಕೆ ಕೇಳಿಬಂದಿದೆ.

ಗೋರಕ್ ಕಶ್ಯಪ್ ಮೂಲತಃ ಉತ್ತರಪ್ರದೇಶದ ಗಾಜಿಪುರ ಮೂಲದವರಾಗಿದ್ದು, ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿರುವ ಶಾಂತಿನಗರದ ಬಳಿ ಸಮೋಸ ಅಂಗಡಿಯನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದರು. ಕುಶಾಲ್ ದೇವಿಯನ್ನು ಮದುವೆಯಾಗಿದ್ದ ಗೋರಕ್ ಕಶ್ಯಪ್‍ಗೆ ಓರ್ವ ಪುತ್ರಿ, ಪುತ್ರನಿದ್ದು ಸಂಸಾರ ನೆಮ್ಮದಿಯಿಂದ ಸಾಗುತಿತ್ತು.

ಸೆಪ್ಟಂಬರ್ 25ರಂದು ಗೋರಕ್ ಕಶ್ಯಪ್ ತನ್ನ ತಂದೆ-ತಾಯಿಯನ್ನು ನೋಡಿಕೊಂಡು ಬರುವಂತೆ ಪತ್ನಿ ಕುಶಾಲ್ ದೇವಿ ಮತ್ತು ಮಗಳಾದ ಅಂಜುವನ್ನು ಗಾಜಿಪುರಕ್ಕೆ ಕಳುಹಿಸಿದ್ದರು. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ತೆರಳಿದ್ದ ಇಬ್ಬರು ಬಳಿಕ ನಾಪತ್ತೆಯಾಗಿದ್ದು, ಸೆಪ್ಟೆಂಬರ್ 28ರಂದು ಪತ್ನಿ ಕುಶಾಲ್ ದೇವಿ ತನ್ನ ಪತಿಗೆ ಕರೆ ಮಾಡಿ ನನ್ನ ಬಳಿ ಇದ್ದ ಹಣವನ್ನೆಲ್ಲಾ ಯಾರೋ ಕಿತ್ತುಕೊಂಡಿದ್ದಾರೆ ಎಂದು ಭಯದಲ್ಲಿ ಕರೆ ಮಾಡಿದ್ದಾರೆ. ನಂತರ ಆ ನಂಬರ್ ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿದೆ.

ಪ್ರೇಮಿಯಿಂದ ಕಿಡ್ನಾಪ್?:
ಗೋರಕ್ ಕುಟುಂಬದವರು ಸಮೋಸ ಅಂಗಡಿಯಲ್ಲಿ ಇದ್ದಾಗ ರಾಹುಲ್ ಎಂಬಾತ ಅಂಗಡಿ ಬಳಿ ಬರುತ್ತಿದ್ದನು. ಇದೇ ವೇಳೆ ಗೋರಕ್ ಕಶ್ಯಪ್ ಮಗಳಾದ ಅಂಜು ಕೂಡ ಅಂಗಡಿಯಲ್ಲಿ ಇರುತ್ತಿದ್ದಳು. ರಾಹುಲ್ ಅಂಜುವಿನ ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿದ್ದಾನೆ. ಇದೇ ವಿಚಾರಕ್ಕೆ ಹಲವಾರು ಬಾರಿ ಇವರ ಕುಟುಂಬದವರು ರಾಹುಲ್‍ನ ಜೊತೆ ಜಗಳವಾಡಿದ್ದಾರೆ. ಅಲ್ಲದೇ ರಾಹುಲ್ ಕೂಡ ತಾಯಿ ಮತ್ತು ಮಗಳು ಕಾಣೆಯಾದ ದಿನದಿಂದ ಕಾಣೆಯಾಗಿದ್ದಾನೆ. ಹೀಗಾಗಿ ಆತನೇ ಇಬ್ಬರನ್ನು ಕಿಡ್ನಾಪ್ ಮಾಡಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಅಮ್ಮ ಅಳುತ್ತಾ ತಂದೆಗೆ ತೆಲಂಗಾಣದಿಂದ ಫೋನ್ ಮಾಡಿರುವ ವಿಚಾರ ತಿಳಿದು ಮಗ ಸೋನೇಶ್ ತೆಲಂಗಾಣಕ್ಕೆ ಹೋಗಿ ತಾಯಿಯನ್ನು ಹುಡುಕುವ ಪ್ರಯತ್ನ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಇಬ್ಬರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *