ಕೃಷಿ ಹೊಂಡದಲ್ಲಿ ಬಿದ್ದು ತಾಯಿ-ಮಗಳು ದುರ್ಮರಣ

ರಾಯಚೂರು: ಕೃಷಿ ಹೊಂಡದಲ್ಲಿ ಬಿದ್ದು ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನ ಲಿಂಗಸುಗೂರಿನ ಮಸ್ಕಿ ಬಳಿ ನಡೆದಿದೆ. ಇಲ್ಲಿನ ಪರಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಶವಗಳು ಪತ್ತೆಯಾಗಿವೆ.

ಮೃತರನ್ನ ಮ್ಯಾದರಾಳ ಗ್ರಾಮದ ಬಸ್ಸಮ್ಮ (40) ಹಾಗೂ ಶಿವಮ್ಮ (16) ಅಂತ ಗುರುತಿಸಲಾಗಿದೆ. ಕೂಲಿ ಕೆಲಸಕ್ಕೆ ಹೋದಾಗ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೊಳೆತ ಸ್ಥಿತಿಯಲ್ಲಿದ್ದ ಮೃತ ದೇಹಗಳು ಶುಕ್ರವಾರ ಸಂಜೆ ಪತ್ತೆಯಾಗಿದ್ದವು. ಮೃತರ ಗುರುತು ಪತ್ತೆಯಾಗಿರಲಿಲ್ಲ. ಇದೀಗ ಮೃತ ಬಸ್ಸಮ್ಮಳ ಪತಿ ರಾಮಪ್ಪ ನಾಯಕ ಗುರುತು ಹಿಡಿದಿದ್ದು, ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಮಸ್ಕಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *