ಗದಗದಲ್ಲಿ ಡೆಂಘೀ ಭೀತಿಗೆ ಊರೇ ಖಾಲಿ!

ಗದಗ: ಜಿಲ್ಲೆಯ ಮನೆಗಳಿಗೆ ಬೀಗ ಹಾಕಿದ್ದರಿಂದ ಊರು ಬಿಕೋ ಅಂತಿದೆ. ಅರ್ಧದಷ್ಟು ಮಂದಿ ಹಳ್ಳಿಯನ್ನೇ ತೊರೆದ್ರೆ ಉಳಿದರ್ಧ ಮಂದಿ ಆಸ್ಪತ್ರೆ ಬೆಡ್‍ಗಳಲ್ಲಿ ನರಳಾಡುತ್ತಿದ್ದಾರೆ. ಅಂದಹಾಗೆ ಇದು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್‍ಕೆ ಪಾಟೀಲ್ ಉಸ್ತುವಾರಿಯಲ್ಲಿ ಬರುವ ಗದಗ ಜಿಲ್ಲೆಯ ರೋಣ ತಾಲೂಕಿನ ಬೈರಾಪೂರ ತಾಂಡದ ಕಥೆ.

ಒಂದು ತಿಂಗಳಿಂದ ಬೈರಾಪೂರ ತಾಂಡದ ಮಂದಿ ವಿಚಿತ್ರ ರೋಗ-ರುಜಿನಗಳಿಂದ ಬಳಲುತ್ತಿದ್ದಾರೆ. ಇದ್ದಕ್ಕಿದ್ದಂತೆ ಜ್ವರ, ತಲೆನೋವು, ಕೀಲುನೋವು, ಹೊಟ್ಟೆ ನೋವು, ವಾಂತಿ ಕಾಣಿಸಿಕೊಳ್ತಿದ್ದು ಊರಿಗೆ ಊರೇ ಆಸ್ಪತ್ರೆ ಸೇರಿದೆ. ಅನೇಕರು ಡೆಂಘೀ ಜ್ವರದಿಂದ ಬಳಲುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ ವೈದ್ಯರು. ಗಜೇಂದ್ರಗಢ ಸರ್ಕಾರಿ ಆಸ್ಪತ್ರೆಯಲ್ಲಿ 70ಕ್ಕೂ ಅಧಿಕ ಮಂದಿ ದಾಖಲಾಗಿದ್ದಾರೆ. ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ದುರ್ಗತಿಗೆ ಸ್ವಚ್ಛ ಕುಡಿಯುವ ನೀರಿನ ಕೊರತೆ, ಸೊಳ್ಳೆ ಮತ್ತು ವಿಪರೀತ ಬಿಸಿಲೇ ಕಾರಣ ಅಂತಾ ಹಳ್ಳಿಯಲ್ಲಿ ಅಧ್ಯಯನ ನಡೆಸಿರುವ ವೈದ್ಯರ ತಂಡ ಹೇಳಿದೆ.

ಸಿಎಂ ಸಿದ್ದರಾಮಯ್ಯ ಸರ್ಕಾರವೇನೋ ನಾಲ್ಕು ವರ್ಷ ಮುಗಿಸಿದ ಖುಷಿಯಲ್ಲಿದೆ. ತನ್ನ ಆಡಳಿತದಲ್ಲಿ ರಾಜ್ಯ ಸುಭಿಕ್ಷವಾಗಿದೆ ಅಂತಾ ಕಾಂಗ್ರೆಸ್ ಬೀಗ್ತಿದೆ. ಆದ್ರೆ ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲೆಯಲ್ಲಿನ ಗ್ರಾಮವೇ ರೋಗಪೀಡಿತವಾಗಿರುವುದು ಮಾತ್ರ ನಿಜಕ್ಕೂ ಶೋಚನೀಯ.

Comments

Leave a Reply

Your email address will not be published. Required fields are marked *