ಜ್ಯೋತಿಷಿಯ ಮಾತು ಕೇಳಿ ಗ್ರಾಮ ಬಿಟ್ಟಿದ್ದ ಚಿಕ್ಕಮಗಳೂರಿನ 50ಕ್ಕೂ ಹೆಚ್ಚು ಕುಟುಂಬ ವಾಪಸ್

ಚಿಕ್ಕಮಗಳೂರು: ಜ್ಯೋತಿಷಿಯ ಮಾತು ಕೇಳಿ ಊರು ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 50ಕ್ಕೂ ಹೆಚ್ಚು ಕುಟುಂಬಗಳು ಎನ್.ಆರ್.ಪುರಕ್ಕೆ ವಾಪಸ್ ಮರಳಿವೆ.

ಊರುಬಿಟ್ಟ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿದ್ದು, 50 ಕುಟುಂಬಗಳನ್ನು ಮನವೊಲಿಸುವಲ್ಲಿ ಶೃಂಗೇರಿ ಶಾಸಕ ರಾಜೇಗೌಡ ಯಶಸ್ವಿಯಾಗಿದ್ದಾರೆ.

ಸಭೆಯಲ್ಲಿ ತಾತ್ಕಲಿಕವಾಗಿ ಎನ್‍ಆರ್ ಪುರ ದಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದ್ದು, ಬೇರೆ ಕಡೆ ಜಾಗ ನೀಡುವುದಾಗಿ ಶಾಸಕರು ಹಾಗೂ ತಾಲೂಕು ಆಡಳಿತದಿಂದ ಭರವಸೆ ನೀಡಲಾಗಿದೆ. ಹೀಗಾಗಿ ಶಾಸಕರ ಮಾತಿಗೆ ಬೆಲೆಕೊಟ್ಟು 50 ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಜ್ಯೋತಿಷಿಯೊಬ್ಬರ ಮಾತು ಕೇಳಿ 15 ವರ್ಷಗಳಿಂದ ವಾಸವಿದ್ದ ಊರನ್ನು ಬಿಟ್ಟು ಬೇರೊಂದು ಕಡೆಗೆ ನೆಲೆ ಅರಸಿ ಸುಮಾರು 50ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬ ಶಿಗುವಾನಿ ಗ್ರಾಮದಿಂದ ರಾತ್ರೋರಾತ್ರಿ ಹೋಗಿದ್ದರು. 8 ವರ್ಷದಲ್ಲಿ 25 ಜನ ನಿಧನ ಹೊಂದಿದ್ದರು. ನಿರಂತರ ಸಾವಿನ ಸಂಗತಿಗೆ ಹೆದರಿದ ಗ್ರಾಮಸ್ಥರು ಜ್ಯೋತಿಷಿಯ ಬಳಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಆಗ ಅವರು ಅಲ್ಲಿ ನಾಗ ದೋಷವಿದೆ, ನಾಗನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ನಾಗ ದೋಷ ನಿವಾರಣೆಗೆ ಪೂಜೆ ಮಾಡಿ, ನಾಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರವೂ ಕೆಲವರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗಿತ್ತು. ಕೊನೆ ಪರಿಹಾರ ಎಂದರೇ ನೀವು ಗ್ರಾಮ ಬಿಟ್ಟು ಹೋಗುವುದೇ ಒಳಿತು ಎಂದು ಜ್ಯೋತಿಷಿ ಹೇಳಿದ್ದ.

ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಗ್ರಾಮವು ಗುರುವಾರ ಸಂಜೆಯೊಳಗಾಗಿ ಖಾಲಿ ಖಾಲಿ ಮಾಡಿದ್ದರು. ಗ್ರಾಮಸ್ಥರು ತಮ್ಮ ಬಟ್ಟೆ, ಪಾತ್ರೆ ಸೇರಿದಂತೆ ಬೆಲೆಪಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದಂತೆ ಗುಡಿಸಲು, ಸಾಕು ನಾಯಿ, ಕೋಳಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದರು.

Comments

Leave a Reply

Your email address will not be published. Required fields are marked *