ಜೈಲಿನಿಂದ ಒಂದೇ ಬಾರಿ 100ಕ್ಕೂ ಹೆಚ್ಚು ಕೈದಿಗಳು ಪರಾರಿ

ಜಕಾರ್ತ: ಇಂಡೋನೇಷ್ಯಾ ಸುಮಾತ್ರಾ ದ್ವೀಪದಲ್ಲಿರುವ ಜೈಲಿನಿಂದ ನೂರಕ್ಕೂ ಹೆಚ್ಚು ಜನ ಕೈದಿಗಳು ಶನಿವಾರ ತಪ್ಪಿಸಿಕೊಂಡಿದ್ದಾರೆ.

ಶನಿವಾರ ಬೆಳಗ್ಗೆ ಸುಮಾತ್ರಾ ದ್ವೀಪದ ಸಿಯಾಕ್ ಜಿಲ್ಲೆಯ ಜೈಲಿನಲ್ಲಿ ಗಲಭೆ ಉಂಟಾಗಿದೆ. ನಂತರ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆ ಸಮಯದಲ್ಲಿ ಕೈದಿಗಳು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.

ಸುಮಾರು 650 ಮಂದಿ ಕೈದಿಗಳಿರುವ ಜೈಲಿನಲ್ಲಿ 100 ಕ್ಕೂ ಹೆಚ್ಚು ಮಂದಿ ತಪ್ಪಿಸಿಕೊಂಡಿದ್ದಾರೆ. ಸೈನ್ಯ ಮತ್ತು ಸ್ಥಳೀಯ ಜನರ ಸಹಾಯದಿಂದ 115 ಮಂದಿಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಇನ್ನೂ ಉಳಿದವರನ್ನು ಬಂಧಿಸಲು ಶೋಧ ಕಾರ್ಯ ಮುಂದುವರಿದಿದೆ ಎಂದು ಇಂಡೋನೇಷ್ಯಾ ರಿಯೂ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ವಿಡೋಡೋ ಇಕೊ ಪ್ರಿಯಾಸ್ಟೋಪೋ ಅವರು ಹೇಳಿದ್ದಾರೆ.

ಜೈಲಿನಲ್ಲಿ ಕೈದಿಗಳು ಮೆಥಾಂಫೆಟಾಮೈನ್ ಎಂಬ ಡ್ರಗ್ಸ್ ಸೇವಿಸುತ್ತಿದ್ದರು. ಈ ವಿಚಾರ ಪೊಲೀಸರ ಕಣ್ಣಿಗೆ ಬಿದ್ದಿದೆ. ಇದನ್ನು ಜೈಲಿನ ಅಧಿಕಾರಿಗಳು ಪ್ರಶ್ನೆ ಮಾಡಿದ್ದಕ್ಕೆ ಅಲ್ಲಿರುವ ಜೈಲಿನ ಸಿಬ್ಬಂದಿ ಮತ್ತು ಕೈದಿಗಳ ನಡುವೆ ಜಗಳ ಶುರುವಾಗಿದ್ದರಿಂದ ಗಲಾಟೆ ನಡೆದಿದೆ ಎಂದು ಪ್ರಿಯಾಸ್ಟೋಪೋ ಅವರು ಹೇಳಿದ್ದಾರೆ.

ಇಂಡೋನೇಷ್ಯಾ ಜೈಲಿನಲ್ಲಿ ಕೈದಿಗಳ ಸಂಖ್ಯೆ ಜಾಸ್ತಿ ಆಗಿರುವ ಕಾರಣ ಅಲ್ಲಿ ಇಂತಹ ಪ್ರಕರಣಗಳು ಜಾಸ್ತಿಯಾಗಿವೆ. 2013 ರಲ್ಲೂ ಇದೇ ರೀತಿಯಲ್ಲಿ ಭಯೋತ್ಪಾದಕಾ ಅಪರಾಧಿಗಳು ಸೇರಿ 150 ಕ್ಕೂ ಹೆಚ್ಚು ಕೈದಿಗಳು ತಪ್ಪಿಸಿಕೊಂಡಿದ್ದರು.

Comments

Leave a Reply

Your email address will not be published. Required fields are marked *