ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲ

ಶಿವಮೊಗ್ಗ: ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಆರೋಪಿಸಿ ಕಾಯಿಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೆಎಫ್‍ಡಿ ಜನಜಾಗೃತಿ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮುಖಂಡರು, “ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 25 ಮಂದಿಯನ್ನು ಈ ಕಾಯಿಲೆ ಬಲಿ ತೆಗೆದುಕೊಂಡಿದೆ. ಮಂಗನ ಕಾಯಿಲೆ ಈ ಬಾರಿಯೂ ಈಗಾಗಲೇ ಒಂದೇ ತಿಂಗಳಲ್ಲಿ ಇಬ್ಬರ ಜೀವ ತೆಗೆದಿರುವುದು ಸಾಕಷ್ಟು ಆತಂಕವನ್ನುಂಟು ಮಾಡಿದೆ” ಎಂದು ಆಪಾದಿಸಿದ್ದಾರೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

ಕಳೆದ ಬೇಸಿಗೆಯಲ್ಲಿ ಹಾಗೂ ಅದರ ಹಿಂದಿನ ವರ್ಷದ ಡಿಸೆಂಬರ್ ವೇಳೆಗೆ ಆರಂಭವಾಗಿದ್ದ ಸಾವಿನ ಸರಣಿ ಇದೀಗ ಮತ್ತೆ ಆರಂಭವಾಗಿದೆ ಎಂದು ದೂರಿದ್ದಾರೆ. ಅಲ್ಲದೆ ಕಳೆದ 50 ವರ್ಷದ ಹಿಂದೆ ಸಂಶೋಧನೆಗೊಂಡ ಚುಚ್ಚುಮದ್ದನ್ನು ಈಗಲೂ ನೀಡಲಾಗುತ್ತಿದೆ. ಆದರೆ ವೈರಸ್‍ನಲ್ಲಿ ಆದ ಬೆಳವಣಿಗೆಗೆ ತಕ್ಕಂತೆ ರೋಗನಿರೋಧಕ ಚುಚ್ಚುಮದ್ದುಗಳನ್ನು ಸಂಶೋಧನೆ ನಡೆಸದೇ ಹಳೆಯ ಮಾದರಿಯ ಚುಚ್ಚುಮದ್ದುಗಳನ್ನು ನೀಡಲಾಗುತ್ತಿದೆ. ಜನರು ಮುಂಜಾಗ್ರತೆಯಾಗಿ ಚುಚ್ಚುಮದ್ದು ಪಡೆದರೂ ಮಂಗನ ಕಾಯಿಲೆಯಿಂದ ಬಳಲುವಂತಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಾರಿಯೂ ಕೂಡ ಜಿಲ್ಲಾಡಳಿತ ಮುಂಜಾಗ್ರತಾವಾಗಿ ಚುಚ್ಚುಮದ್ದು ವಿಷಯದಲ್ಲಾಗಲಿ, ಮಂಗನ ಸಾವಿನ ಪತ್ತೆ ಕೂಂಬಿಂಗ್ ಆಗಲಿ, ಕನಿಷ್ಠ ಜನಜಾಗೃತಿಯ ಕ್ರಮವನ್ನಾಗಲಿ ಮುಂಚಿತವಾಗಿ ಕೈಗೊಂಡಿಲ್ಲ. ಲೋಪಗಳ ಫಲವಾಗಿ ಇದೀಗ ಮತ್ತೆ ನಾಲ್ಕು ಮುಗ್ಧ ಜೀವಗಳು ಬಲಿಯಾಗಿದೆ ಎಂದು ದೂರಿದ್ದಾರೆ. ಕಳೆದ ಬಾರಿ ಸೋಂಕಿತರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ ಸರ್ಕಾರ ಈವರೆಗೆ ಖಾಸಗಿ ಆಸ್ಪತ್ರೆಗೆ ಹಣ ಪಾವತಿ ಮಾಡಿಲ್ಲ ಎಂದು ದೂರಿದ್ದಾರೆ.

ಈ ಕಾರಣಕ್ಕೆ ಕೆಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಚಿಕಿತ್ಸಾ ವೆಚ್ಚವನ್ನು ಸಕಾಲದಲ್ಲಿ ಬಿಡುಗಡೆ ಮಾಡುವಂತೆ ಹಾಗೂ ಸೋಂಕಿತರ ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಆದರೆ ಈ ವಿಷಯ ಜಿಲ್ಲಾಡಳಿತ ಕಡೆಯಿಂದ ಸಾಕಷ್ಟು ಲೋಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಳೆದ ವರ್ಷವೇ ಸಾಗರದಲ್ಲಿ ವೈರಾಣು ರೋಗ ಸಂಶೋಧನೆಗಾಗಿ ವಿಶೇಷ ಪ್ರಯೋಗಾಲಯ ಆರಂಭಿಸಲು ಸರ್ಕಾರ 5 ಕೋಟಿ ರೂ. ಬಿಡುಗಡೆ ಮಾಡಿದರು, ಇವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *