ಮಗನ ಜೊತೆ ಮಾತಾಡಿದ್ದೇ ತಪ್ಪಾಯ್ತು

-ರೈತನ 5.50 ಲಕ್ಷ ದೋಚಿದ ದುಷ್ಕರ್ಮಿಗಳು

ಮೈಸೂರು: ರೈತನೊಬ್ಬ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಬರುವಾಗ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 5.50 ಲಕ್ಷ ಹಣ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.

ಹುಣಸೂರು ಪಟ್ಟಣದ ಬೈಪಾಸ್ ರಸ್ತೆಯ ತಾಲೂಕು ಕಚೇರಿ ಬಳಿ ಹಾಡಹಗಲೇ ಈ ಘಟನೆ ನಡೆದಿದೆ. ತಾಲೂಕಿನ ಹನಗೋಡು ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಶಿವಣ್ಣೇಗೌಡ ಹಣ ಕಳೆದು ಕೊಂಡ ರೈತ. ಹುಣಸೂರಿನ ಬೈಪಾಸ್ ರಸ್ತೆಯಲ್ಲಿನ ಕೆನರಾ ಬ್ಯಾಂಕ್‍ನಲ್ಲಿ ಭೂಮಿ ನೋಂದಣಿಗಾಗಿ ಬ್ಯಾಂಕ್‍ನಿಂದ 5.50 ಲಕ್ಷ ಹಣ ಡ್ರಾ ಮಾಡಿದ್ದರು.

ಹಣ ಡ್ರಾ ಮಾಡಿರುವ ಬಗ್ಗೆ ಮೊಬೈಲ್‍ನಲ್ಲಿ ಮಗನ ಜೊತೆ ಮಾತನಾಡಿದ್ದಾರೆ. ಇದನ್ನು ಕೇಳಿಸಿಕೊಂಡ ಇಬ್ಬರು ದುಷ್ಕರ್ಮಿಗಳು ಶಿವಣ್ಣೇಗೌಡ ಹಣದ ಬ್ಯಾಗ್ ಇಟ್ಟುಕೊಂಡು ಬೈಕ್ ನಲ್ಲಿ ಹೋಗುವಾಗ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ನಂತರ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಎಸ್‍ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *