ಇದು ಉದ್ದೇಶಪೂರ್ವಕ ಕೃತ್ಯ: ಹ್ಯಾರಿಸ್ ಪುತ್ರ ನಲಪಾಡ್ ಆರೋಪ

ಬೆಂಗಳೂರು: ನಮ್ಮ ತಂದೆಯ ಮೇಲೆ ನಡೆದ ದಾಳಿ ಉದ್ದೇಶಪೂರ್ವಕ ಕೃತ್ಯ ಎಂದು ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನಲಪಾಡ್, ಪ್ರತಿ ವರ್ಷದಂತೆ ನಮ್ಮ ತಂದೆಯ ಹುಟ್ಟುಹಬ್ಬದ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಮೇಲಿದ್ದ ವಿಶೇಷ ಚೇರ್ ಮೇಲೆ ಕುಳಿತುಕೊಳ್ಳಲು ತಂದೆ ನಿರಾಕರಿಸಿದರು. ಹೀಗಾಗಿ ಸಾಮಾನ್ಯರಂತೆ ಪಕ್ಕದ ಚೇರ್ ಮೇಲೆ ಕುಳಿತಿದ್ದಾಗ ಯಾರೋ ವೇದಿಕೆಯ ಕಡೆಗೆ ಗ್ರೀನ್ ಕಲರ್ ಪ್ಲ್ಯಾಸ್ಟಿಕ್ ವಸ್ತು ಎಸೆದರು. ಅದು ತಂದೆಯ ಭುಜಕ್ಕೆ ಬಡಿದು ಕೆಳಗೆ ಬಿದ್ದು ಸ್ಫೋಟಗೊಂಡಿದೆ. ಹೀಗಾಗಿ ಕಾಲಿಗೆ ಗಾಯವಾಗಿದೆ ಎಂದರು.

ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಮೋಹನ್, ಚಿಟ್ಟಿಬಾಬು ಹಾಗೂ ಸಂಪತ್ ಗಾಯಗೊಂಡಿದ್ದಾರೆ. ಪಕ್ಕದ ಚೇರ್ ಮೇಲೆ ಕುಳಿದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಒಂದು ವೇಳೆ ತಂದೆ ಹ್ಯಾರಿಸ್ ಅವರ ಮೇಲೆ ಬಿದ್ದ ತಕ್ಷಣವೇ ಸ್ಫೋಟಕ ಸ್ಫೋಟಗೊಂಡಿದ್ದರೆ ಘಟನೆ ತೀವ್ರವಾಗಿರುತ್ತಿತ್ತು. ಬ್ಲಾಸ್ಟ್ ತೀವ್ರತೆಯಿಂದ ತಂದೆಯ ಕಿವಿಯಲ್ಲಿ ಗುಂಯ್ ಎನ್ನುವ ಶಬ್ದ ಕೇಳುತ್ತಿದೆಯಂತೆ ಎಂದು ಹೇಳಿದರು.

ಕ್ಷೇತ್ರದಲ್ಲಿ ನಮಗೆ ಯಾವುದೇ ವೈರಿಗಳಿಲ್ಲ. ನಮ್ಮ ತಂದೆ ಎಲ್ಲರ ಜೊತೆಗೆ ಸೇರಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದರೆ ಇದು ಉದ್ದೇಶಪೂರ್ವಕ ಕೃತ್ಯವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

Comments

Leave a Reply

Your email address will not be published. Required fields are marked *