ಮೋದಿಯಿಂದ ಹಿಂದೂಸ್ತಾನ ಇಬ್ಭಾಗ: ರಾಹುಲ್ ಗಾಂಧಿ

– ಒಂದು ಅನಿಲ್ ಅಂಬಾನಿ, ಇನ್ನೊಂದು ರೈತರಿಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂಸ್ತಾನವನ್ನು ಎರಡು ಭಾಗವಾಗಿ ವಿಭಜನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಒಂದು ಅನಿಲ್ ಅಂಬಾನಿ ಹಿಂದೂಸ್ತಾನ, ಇನ್ನೊಂದು ರೈತರ ಹಿಂದೂಸ್ತಾನ ಎಂದು ವಿಭಜನೆ ಮಾಡಿದ್ದಾರೆ. ಯಾವುದೇ ಕೆಲಸ ಮಾಡದೇ, ಒಂದು ವಿಮಾನವನ್ನು ತಯಾರಿಸದ ಕಂಪನಿಗೆ ಮೋದಿಜೀ 30 ಸಾವಿರ ಕೋಟಿಯ ರಫೇಲ್ ಗುತ್ತಿಗೆ ಕೊಡುತ್ತಾರೆ. ದೇಶದ ರೈತರು ತಿಂಗಳಿನಿಂದ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದ 750 ಕೆಜಿ ಈರುಳ್ಳಿಗೆ ಕೇವಲ 1040 ರೂ. ಸಿಗುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿಯುತ್ತಿದ್ದು, ರೈತರು ಬೆಂಬಲ ಬೆಲೆಗೆ ಆಗ್ರಹಿಸುತ್ತಿದ್ದಾರೆ. ಮಹಾರಾಷ್ಟ್ರದ ನಾಸಿಕ್ ಮಾರುಕಟ್ಟೆಯಲ್ಲಿ ಓರ್ವ ರೈತನಿಗೆ ತನ್ನ 750 ಕೆಜಿ ಈರುಳ್ಳಿಗೆ ಕೇವಲ 1064 ರೂ. ಸಿಕ್ಕಿತ್ತು.

ನಾಸಿಕ್ ಜಿಲ್ಲೆಯ ನಿಪಾಢ್ ತೆಹಸಿಲ್ ಗ್ರಾಮದ ರೈತ ಸಂಜಯ್ ಸತೆ ತಾವು ಬೆಳೆದ 750 ಕೆ.ಜಿ. ಈರುಳ್ಳಿ ಜೊತೆ ಮಾರುಕಟ್ಟೆಗೆ ಬಂದಿದ್ದರು. ಖರೀದಿದಾರರು ರೈತನ ಒಂದು ಕೆಜಿ ಈರುಳ್ಳಿಗೆ ಒಂದು ರೂಪಾಯಿ ನಿಗದಿಪಡಿಸಿದ್ದರು. ಕೊನೆಗೆ ರೈತನ ಮನವಿಯ ಮೇರೆ 1.40 ರೂ. ಯಂತೆ 750 ಕೆಜಿ ಈರುಳ್ಳಿಯನ್ನು ಖರೀದಿ ಮಾಡಿಕೊಂಡಿದ್ದರು. ಇದರಿಂದ ಬೇಸತ್ತ ರೈತ ಕೈಯಿಂದ 50 ರೂ. ಸೇರಿಸಿ ತನ್ನೆಲ್ಲ ಈರುಳ್ಳಿ ಆದಾಯವನ್ನು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ಕಳುಹಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *