ರೈತರಿಗೆ ಭಿಕ್ಷೆಯ ರೀತಿ 2 ಸಾವಿರ ನೀಡಿ ಮೋದಿಯಿಂದ ಅವಮಾನ : ಪ್ರಜ್ವಲ್ ರೇವಣ್ಣ

ಹಾಸನ: ಲೋಕಸಮರಕ್ಕೆ ಹಾಸನದಿಂದ ಕಣಕ್ಕಿಳಿದಿರುವ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಲಗೌಡನಹಳ್ಳಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದು, ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿಗೆ ವೋಟು ಯಾಕೆ ಹಾಕಬೇಕು? ಅವರು ಸುಳ್ಳು ಭರವಸೆಯನ್ನು ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಮೋದಿ ಅವರು ರೈತರಿಗೆ ಅನ್ಯಾಯ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಜನಧನ್ ಖಾತೆಗೆ 15 ಲಕ್ಷ ಹಾಕುವುದಾಗಿ ಸುಳ್ಳು ಭಾಷಣ ಮಾಡಿದ್ದರು. ಅವರನ್ನು ನಂಬಿ ರೈತರು, ಬಡವರು ಬ್ಯಾಂಕ್ ಖಾತೆ ತೆರೆದರು. ಆದ್ರೆ ಮೋದಿ ಅವರು ತಮ್ಮ ಮಾತನ್ನು ಉಳಿಸಿಕೊಂಡಿಲ್ಲ. ಅಲ್ಲದೆ ರೈತರಿಗೆ ಭಿಕ್ಷೆಯ ರೀತಿ 2 ಸಾವಿರ ಹಾಕಿ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಮೋದಿಗೆ ಯಾವ ಕಾರಣಕ್ಕೆ ಮತ ನೀಡಬೇಕು ಎಂದು ಯುವಕರು ಯೋಚಿಸಬೇಕು. ಅಧಿಕಾರಕ್ಕೆ ಬರುವ ಮುನ್ನ ಮೋದಿ ಅವರು ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿ ಕೊಡುವ ಭರವಸೆ ನೀಡಿದ್ದರು. ಆದ್ರೆ ಈಗ ಎಷ್ಟು ಮಂದಿ ಯುವಕರು ಮೋದಿ ಹೆಸರು ಹೇಳಿಕೊಂಡು ಕೆಲಸಕ್ಕೆ ಹೋಗುತ್ತಿದ್ದಿರಾ ಹೇಳಿ? ಮೋದಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಯುವಕರಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಬಿಜೆಪಿ, ಮೋದಿ, ಎ. ಮಂಜು ಅಲ್ಲ ನಾವು ಜೆಡಿಎಸ್‍ನ ಹಾಗೂ ಜಾತ್ಯಾತೀತ ನಿಲುವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಮೈತ್ರಿ ಪಕ್ಷದ ಅಭ್ಯರ್ಥಿಯಾದ ನಾನು ಟೀಕೆಯ ಸಂಸೃತಿ ಬೆಳೆಸಿಕೊಂಡಿಲ್ಲ, ನಮ್ಮದು ಅಭಿವೃದ್ಧಿ ಸಂಸ್ಕೃತಿ ಎಂದು ಹೇಳಿದರು.

Comments

Leave a Reply

Your email address will not be published. Required fields are marked *