ಮೋದಿ, ಅಮಿತ್ ಶಾ ತಲೆಯಲ್ಲಿ ಏನು ಇಲ್ಲ ಅನ್ನೋದಕ್ಕೆ ಪುರಾವೆ ನನ್ನಲ್ಲಿದೆ: ಪ್ರಕಾಶ್ ರೈ

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಕೋಡಾ ಮಾಡುವುದನ್ನು ಉದ್ಯೋಗ ಎನ್ನುತ್ತಿದೆ. ಏಕೆಂದರೆ ಅವರು ರೈತರ ಸಮಸ್ಯೆ ಎಂದರೆ ಟೊಮೆಟೊ, ಪೊಟ್ಯಾಟೋ, ಆನಿಯನ್ ಅಷ್ಟೇ ಎಂದು ತಿಳಿದುಕೊಂಡಿದ್ದಾರೆ. ಅವರ ತಲೆಯಲ್ಲಿ ಅಷ್ಟೇ ಇದೇ ಎಂದು ಮತ್ತೊಮ್ಮೆ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರಕ್ಕೆ ನಮ್ಮನ್ನು ಆಳುವ ಶಕ್ತಿ ಇಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ದೇಶವನ್ನು ಆಳುವಷ್ಟು ಯೋಗ್ಯರಲ್ಲ. ಅವರ ತಲೆಯಲ್ಲಿ ಏನು ಇಲ್ಲ ಎನ್ನಲು ನಮ್ಮ ಬಳಿ ಪುರಾವೆ ಇವೆ. ದೇಶದ ಆರ್ಥಿಕ ಸ್ಥಿತಿ ಬಗ್ಗೆ ನಯ್ಯಾ ಪೈಸೆ ಬುದ್ಧಿ ಇಲ್ಲದಂತ ಇವರು ನಮ್ಮ ನಾಯಕರಾ? ಚುನಾವಣೆಯಲ್ಲಿ ಗೆದ್ದ ಬಳಿಕ ಅವರು ದೇಶದ ಸರ್ಕಾರ ಭಾಗವಾಗಬೇಕು. ಆದರೆ ಅವರು ತಮ್ಮ ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ನಮ್ಮನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಂದು ಜಾತಿಯನ್ನು ಭೂಮಿಯಿಂದ ನಾಶ ಮಾಡಬೇಕು. ಜಾತ್ಯಾತೀತರಿಗೆ ಅಪ್ಪ ಅಮ್ಮ ಇಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳುತ್ತಾರೆ. ಅವರು ರಾಕ್ಷಸರಂತೆ ವರ್ತಿಸಿದರೂ ಅವರನ್ನು ಪಕ್ಷದಿಂದ ಉಚ್ಛಾಟಿಸಲ್ಲ. ಅದ್ದರಿಂದ ಅವರೂ ಕೂಡಾ ರಾಕ್ಷಸರೇ ಎಂದರು.

ನನ್ನ ತಾಯಿಯದ್ದು ಕ್ರೈಸ್ತ ಧರ್ಮ. ನನ್ನ ಪತ್ನಿ ಹಿಂದೂ. ಆದರೆ ನನಗೆ ಧರ್ಮದ ಬಗ್ಗೆ ಯೋಚನೆ ಮಾಡಲು ಸಮಯವಿಲ್ಲ. ಆದರೆ ಇವರು ಹೇಳಿದ ತಕ್ಷಣ ನಾನು ನನ್ನ ತಾಯಿಯನ್ನು ಪಾಕಿಸ್ತಾನಕ್ಕೆ ಕಳಿಸ್ಲಾ? ನಾನು ಜಾತ್ಯಾತೀತ. ನನ್ನ ರಕ್ತದ ಬಗ್ಗೆ ಮಾತನಾಡುತ್ತಿರಾ? ಮೊದಲು ನೀವು ಮೊದಲು ಹೊರಗೆ ಹೋಗಿ ಎಂದು ಹರಿಹಾಯ್ದರು.

ಸೊಂಟದ ಕೆಳಗಿನ ಭಾಷೆ ಮಾತನಾಡುವ ಸಂಸದ ಪ್ರತಾಪ ಸಿಂಹನ ಕೈಯಲ್ಲಿ ನಮ್ಮ ದೇಶ ಹೇಗೆ ಕೊಡಲಿ ಎಂದು ಪ್ರಶ್ನೆ ಬರುತ್ತೆ. ಅನಂತಕುಮಾರ ಹೆಗಡೆ ಅವರ ವಿರುದ್ಧ `ಅಂಬಾ..ಅಂಬಾ..ಹುಂಬಾ ಹುಂಬಾ’ ಚಳುವಳಿ ಮಾಡಿ ಎಂದು ಈ ವೇಳೇ ಯುವಕರಿಗೆ ಕರೆ ನೀಡಿದರು.

ಆರ್ ಎಸ್‍ಎಸ್ ನಂತಹ ಚಡ್ಡಿ ಹಾಕಿಕೊಂಡ ಒಂದು ಸಂಸ್ಥೆ ಮೂರು ದಿನದಲ್ಲಿ ಸೇನೆ ಕಟ್ಟುತ್ತಾರೆ ಅಂತೆ. ಪಾಕಿಸ್ತಾನದ ಜೊತೆ ಹೋರಾಟ ಮಾಡುತ್ತಾರೆ ಅಂತೆ. ಸಂವಿಧಾನ, ನ್ಯಾಯಾಲಯ ಹಾಗೂ ಆರ್ಮಿ ಬೇಕಾಗಿಲ್ಲ, ನಾವು ಹೇಳಿದ್ದೇ ನಿಜ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನ ದೇಶಕ್ಕೆ ಕ್ಯಾನ್ಸರ್ ಬಂದಾಗ ನಾವು ಅದಕ್ಕೆ ಮೊದಲು ಚಿಕಿತ್ಸೆ ನೀಡಬೇಕು, ಹೊರತು ಕೆಮ್ಮಿಗೆ ಅಲ್ಲ. ಪಕೋಡಾ ಮಾರಿ 200 ರೂ. ಸಂಪಾದನೆ ಮಾರುವುದು ಉದ್ಯೋಗ ಎಂದಾದರೆ, ನನ್ನ ದೇಶದ ಹೆಣ್ಣು ಮಗಳು ಮೈಮಾರಿ ಸಂಪಾದನೆ ಮಾಡಿದರೆ ಉದ್ಯೋಗ ಎನ್ನುತ್ತೀರಾ ಎಂದು ಕಿಡಿಕಾರಿದರು.

ಮೇಕಪ್ ಹಾಕಿಕೊಂಡು ಬಂದ ನಟರನ್ನು ರಾಮ ಸೀತೆ ಎಂತಾ ಹೇಳುತ್ತೀರಾ, ಇದು ನಾನ್ ಸೆನ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದಲ್ಲಿ ಪೂಜೆ ಮಾಡುವವರು ನಮ್ಮನ್ನ ಮನುಷ್ಯನ ಪೂಜೆ ಮಾಡಲು ಹೇಳುತ್ತಾರೆ. ನಮ್ಮನ್ನ ಮೋಸ ಮಾಡುತ್ತಿದ್ದಿರಾ. ಅನಂತಕುಮಾರ ಹೆಗ್ಡೆ ಸಂವಿಧಾನ ಬದಲಿಸುವ ಮಾತನ್ನು ಹೇಳುತ್ತಾರೆ ಅವರನ್ನು `ಶಟಪ್’ ಎಂದು ಹೇಳಲು ಇಂದಿನ ಯುವಕರಿಗೆ ಆಗುವುದಿಲ್ಲವಾ ಎಂದು ಪ್ರಶ್ನಿಸಿ ಹರಿಹಾಯ್ದರು.

Comments

Leave a Reply

Your email address will not be published. Required fields are marked *