ವೇದವ್ಯಾಸ್ ಕಾಮತ್ ಐಡಿಯಾಕ್ಕೆ ಸ್ವಿಗ್ಗಿ ಮೆಚ್ಚುಗೆ

ಮಂಗಳೂರು: ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ವರ್ಷಗಳಿಂದಲೇ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಸ್ಟ್ 15ರಂದು ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇವರ ಹೊಸ ಐಡಿಯಾಕ್ಕೆ ಸ್ವಿಗ್ಗಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಹೌದು. ವೇದವ್ಯಾಸ್ ಕಾಮತ್ ಅವರು ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಆನ್ ಲೈನ್ ಆಹಾರ ಪೂರೈಸುವ ಕಂಪನಿಗಳಿಗೆ ಒಂದೊಳ್ಳೆ ಉಪಾಯವನ್ನು ನೀಡಿದ್ದಾರೆ. ಆಹಾರ ಪೂರೈಕೆ ಮಾಡಲು ಪ್ಲಾಸ್ಟಿಕ್ ಬದಲು ಅಡಿಕೆ ಮರದ ಹಾಳೆಯನ್ನು ಬಾಕ್ಸ್ ಮಾಡಿ ಬಳಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಕಾಮತ್ ಅವರು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಫೊಟೋ ಸಮೇತ ಹಾಕಿ ಬರೆದುಕೊಂಡು ಸ್ವಿಗ್ಗಿ, ಝೋಮ್ಯಾಟೋ ಹಾಗೂ ಉಬರ್ ಈಟ್ಸ್ ಗೆ ಪಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

ಕಾಮತ್ ಅವರು ಈ ಪೋಸ್ಟ್ ಹಾಕುತ್ತಿದ್ದಂತೆಯೇ ಆನ್ ಲೈನ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಪ್ರತಿಕ್ರಿಯಿಸಿದ್ದು, ತಕ್ಷಣದಿಂದಲೇ ಈ ಹೊಸ ಐಡಿಯಾವನ್ನು ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದೆ. ಸ್ವಗ್ಗಿ ಅವರ ಈ ಪ್ರತಿಕ್ರಿಯೆಗೆ ರಿಫ್ಲೈ ಮಾಡಿದ ಕಾಮತ್, ಅಡಿಕೆ ಹಾಳೆಗಳು ಲಭ್ಯವಾಗುವ ವಿವರಗಳನ್ನು ಶೀಘ್ರವೇ ತಿಳಿಸುವುದಾಗಿ ಹೇಳಿದ್ದು, ಇದಕ್ಕೆ ಸ್ವಿಗ್ಗಿ ಧನ್ಯವಾದ ಹೇಳಿದೆ.

ವೇದವ್ಯಾಸ್ ಕಾಮತ್ ಅವರು ಈ ಹಿಂದೆಯೂ ಮಂಗಳೂರಿನ ಆಹಾರ ಪೂರೈಕೆ ಸಂಸ್ಥೆಗಳಿಗೆ ಪ್ಲಾಸ್ಟಿಕ್ ನಲ್ಲಿ ಆಹಾರ ಕಟ್ಟಿಕೊಡದಂತೆ ಹೇಳಿದ್ದರು. ಅಲ್ಲದೆ ಪ್ಲಾಸ್ಟಿಕ್ ಬದಲು ಬಾಳೆ ಎಲೆಯಲ್ಲಿ ಆಹಾರ ಪ್ಯಾಕ್ ಮಾಡಿ ಎಂದಿದ್ದರು.

Comments

Leave a Reply

Your email address will not be published. Required fields are marked *