ಶಾಸಕ ಸುನೀಲ್ ಕುಮಾರ್ ಒಬ್ಬ ಉಗ್ರಗಾಮಿ – ಕಾರ್ಕಳದಲ್ಲೇ ರಮಾನಾಥ ರೈ ವಾಗ್ದಾಳಿ

ಉಡುಪಿ: ಶಾಸಕ, ವಿಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ಒಬ್ಬ ಉಗ್ರಗಾಮಿ ಎಂದು ಸಚಿವ ರಮಾನಾಥ ರೈ ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಕಾರ್ಕಳದ ಅತ್ತೂರು ಚರ್ಚ್‍ಗೆ ಬಂದಿದ್ದ ಸಚಿವ ರಮಾನಾಥ ರೈ ಅವರು, ಶಾಸಕ ಸುನೀಲ್ ಒಬ್ಬ ರ್ಯಾಡಿಕಲ್ ವ್ಯಕ್ತಿತ್ವದ ಶಾಸಕ ಎಂದು ಸುನೀಲ್ ಕುಮಾರ್ ಅವರ ಸ್ವ-ಕ್ಷೇತ್ರದಲ್ಲೇ ವಾಗ್ದಾಳಿ ನಡೆಸಿದರು.

ನನ್ನ ಕ್ಷೇತ್ರಕ್ಕೆ ಬಂದು ಸುನೀಲ್ ಕುಮಾರ್ ವೃಥಾರೋಪ ಮಾಡಿದ್ದಾರೆ. ಎಷ್ಟೇ ಮಾತನಾಡಿದರೂ ನನ್ನನ್ನು ಸುನೀಲ್ ಕುಮಾರ್ ಗೆ ಏನೂ ಮಾಡಲು ಆಗಲ್ಲ. ಅವನ ಮಾತುಗಳಲ್ಲಿ ಎಲ್ಲವೂ ಸುಳ್ಳೇ ಇತ್ತು. ಸತ್ಯ ಕಾಣುವುದಿಲ್ಲ. ಸುನೀಲ್ ಗೆ ಕನಿಷ್ಠ ಜ್ಞಾನವೂ ಇಲ್ಲ. ಜನಪ್ರತಿನಿಧಿಯಾಗಿ ಹೇಗೆ ವರ್ತಿಸಬೇಕು ಎಂದು ಅವನಿಗೆ ಗೊತ್ತೇ ಇಲ್ಲ ಎಂದು ಏಕವಚನದಲ್ಲಿ ಬೈಗುಳಗಳ ಸುರಿಮಳೆಗೈದರು.

ದೇವರೊಬ್ಬನೇ ಎಂದು ನಾನು ತಿಳಿದುಕೊಂಡಿದ್ದೇನೆ. ನನಗೆ ಬೇಧಭಾವ ಇಲ್ಲ. ದೇವರ ಮೇಲೆ ನಂಬಿಕೆ, ಗೌರವ ಇದ್ದವರು ಇಂತಹ ಸಣ್ಣತನದ ಮಾತುಗಳನ್ನು ಹೇಳಬಾರದು. ನನಗೆ ನನ್ನ ತಂದೆ ರಾಮೇಶ್ವರದಲ್ಲಿ ರಮಾನಾಥ ಎಂದು ಹೆಸರಿಟ್ಟಿದ್ದಾರೆ. ನಾನೇನೂ ಹಿಂದೂ ವಿರೋಧಿಯಲ್ಲ. ಕೋಮು ಸೂಕ್ಷ್ಮ ಪ್ರದೇಶವಾದ ಬಂಟ್ವಾಳದಲ್ಲಿ ಪ್ರಚೋದನಾತ್ಮಕ ಭಾಷಣ ಸರಿಯಲ್ಲ ಎಂದು ಹೇಳಿದರು.

ಸುನೀಲ್ ಕುಮಾರ್ ಮನಸ್ಸಲ್ಲಿ ಬರೀ ಮತೀಯವಾದ ತುಂಬಿಕೊಂಡಿದೆ. ಮನಸ್ಸಲ್ಲಿ ಇದ್ದದ್ದು ಮಾತಿನ ಮೂಲಕ ಬಾಯಲ್ಲಿ ಬಂದಿದೆ. ಈ ಬಾರಿ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನ ಇದಕ್ಕೆ ಸರಿಯಾಗಿಯೇ ಉತ್ತರ ಕೊಡುತ್ತಾರೆ ಎಂದು ಹೇಳಿದರು. ಅಲ್ಲದೇ ಹುಲಿ ಯೋಜನೆಯ ಭಯ ಹುಟ್ಟಿಸಿ ಸುನೀಲ್ ಕಾರ್ಕಳದಲ್ಲಿ ಶಾಸಕರಾದರು. ಜೋಳಿಗೆ ಹಿಡಿದು ಬಂದಿದ್ದ ಸುನೀಲ್ ಇಂದು ಎಷ್ಟು ಸಂಪತ್ತು ಮಾಡಿದ್ದಾರೆ ಎಂದು ಗೊತ್ತಿದೆ ಎಂದು ಮಾತಿನ ಚಾಟಿ ಬೀಸಿದರು.

ನನ್ನ ಜಾತ್ಯಾತೀತ ನಿಲುವನ್ನು ಸುನೀಲ್ ಕುಮಾರ್ ಪ್ರಶ್ನಿಸಬಾರದು. ಆರು ಬಾರಿ ಒಬ್ಬ ಒಂದು ಕ್ಷೇತ್ರದಿಂದ ಗೆದ್ದಿದ್ದಾನೆ ಎಂದರೆ ಆ ವ್ಯಕ್ತಿಯನ್ನು ಜನ ಮತ್ತೆ ಮತ್ತೆ ಯಾಕೆ ಆರಿಸುತ್ತಾರೆ ಎಂದು ತಿಳಿದುಕೊಳ್ಳುವ ಸಾಮಾನ್ಯ ಪರಿಜ್ಞಾನವೂ ಶಾಸಕರಿಗೆ ಇಲ್ಲ ಎಂದರು.

Comments

Leave a Reply

Your email address will not be published. Required fields are marked *