ರಾಜ್ಯದಲ್ಲಿ ಒಬ್ಬ ರೈತನ ಸಾಲಮನ್ನಾವಾಗಿದ್ರೆ ರಾಜಕೀಯ ನಿವೃತ್ತಿ: ಶ್ರೀರಾಮುಲು ಸವಾಲು

ಕೊಪ್ಪಳ: ಇದುವರೆಗೂ ರಾಜ್ಯದಲ್ಲಿ ಒಬ್ಬ ರೈತನ ಸಾಲಮನ್ನಾ ಆಗಿದ್ದರೆ, ಇಂದೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೆನೆ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮಲು ಸವಾಲು ಎಸೆದಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇಷ್ಟು ದಿನ ಕಳೆದರು ರೈತರ ಸಾಲಮನ್ನಾ ಆದೇಶ ಹೊರಡಿಸಿಲ್ಲ. ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಇದುವರೆಗೂ ಆರ್‍ಬಿಐ, ಸೇರಿದಂತೆ ಯಾವುದೇ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿಲ್ಲ. ಸಾಲ ಮನ್ನಾ ಹೇಗೆ ಆಗುತ್ತದೆ, ಯಾವ ರೀತಿ ಬ್ಯಾಂಕ್‍ಗಳಿಗೆ ಹಣ ಪಾವತಿ ಮಾಡುತ್ತೇವೆ ಎಂದು ಸರ್ಕಾರ ಮಾಹಿತಿಯೇ ನೀಡಿಲ್ಲ ಎಂದು ಆರೋಪಿಸಿದರು.

ಎಚ್‍ಡಿಕೆ ಲೇಟ್ ಕಮ್ಮರ್:
ಮಾಜಿ ಪ್ರಧಾನಿ ದೇವೆಗೌಡರ ಮಕ್ಕಳಿಗೆ ಸಂಸ್ಕಾರವೇ ಇಲ್ಲ ಎಂದು ಇದೇ ವೇಳೆ ಕಿಡಿಕಾರಿದ ಅವರು, ಜನರೊಂದಿಗೆ ಹೇಗೆ ವರ್ತಿಸಬೇಕೆಂಬುದು ತಿಳಿದಿಲ್ಲ. ಪ್ರಧಾನಿ ಮಕ್ಕಳೆಂದರೆ ಜನರಿಗೆ ಒಳ್ಳೆಯದನ್ನು ಹೇಳಿಕೊಡುವ ಕೆಲಸ ಮಾಡಬೇಕು. ಮಂತ್ರಿಗಳಾಗಿ ರೇವಣ್ಣ ಬಿಸ್ಕೆಟ್ ಎಸೆದಿದ್ದಕ್ಕೆ ಜನರಿಗೆ ನೋವಾಗಿದೆ. ಕೊಡಗಿನ ಪ್ರವಾಹ ವಿಷಯದಲ್ಲಿ ಸಿಎಂ ಕುಮಾರಸ್ವಾಮಿ ಲೇಟ್ ಕಮ್ಮರ್ ಆಗಿದ್ದಾರೆ. ಕೊಡಗು ಪ್ರವಾಹದ ಕುರಿತು ರಾಜ್ಯದ ಮುಖ್ಯಮಂತ್ರಿಗಳು ಇದೂವರೆಗೂ ಕೇಂದ್ರಕ್ಕೆ ವರದಿ ನೀಡಿಲ್ಲ ಎಂದು ಆರೋಪಿಸಿದರು.

ಕೆಪಿಸಿಸಿ ಮುಖಂಡನಿಗೆ ಎಚ್ಚರಿಕೆ:
ಬಿಜೆಪಿ ಹುಚ್ಚಾಸ್ಪತ್ರೆ ಎಂಬ  ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ಕೊಟ್ಟ ಶ್ರೀರಾಮುಲು, ಹರಿಪ್ರಸಾದ್ ಬಹಳಷ್ಟು ಬುದ್ಧಿ ಜೀವಿಗಳು, ಅವರಿಗೆ ಪ್ರ್ಯಾಕ್ಟಿಕಲ್ ನಾಲೇಜ್ ಇಲ್ಲ. ಏಕೆಂದರೆ ಅವರು ಜನರಿಂದ ಆಯ್ಕೆಯಾಗದೇ ದೆಹಲಿಗೆ ಹೋಗುತ್ತಾರೆ. ಬಳಿಕ ಲಾಬಿ ಮಾಡುತ್ತಾರೆ. ಕೆಲ ಪುಸ್ತಕ ಓದಿಕೊಂಡು ಬುದ್ಧಿ ಜೀವಿಗಳೆಂದುಕೊಂಡು ಮಾತನಾಡುತ್ತಾರೆ. ಅವರ ಮಾತು ಗಮನಿಸಿದರೆ ಸದ್ಯ ರಾಹುಲ್ ಗಾಂಧಿ ಹುಚ್ಚಾಸ್ಪತ್ರೆಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಏಕೆಂದರೆ ದೇಶದ ನಿರುದ್ಯೋಗ ಸಮಸ್ಯೆ ಕುರಿತು ಇರಾಕ್, ಇರಾನ್ ನಲ್ಲಿ ಮಾತನಾಡಿದರೆ ಯಾವುದೇ ಪ್ರಯೋಜನ ಆಗಲ್ಲ. ರಾಹುಲ್ ಗಾಂಧಿ ವಿದೇಶದಲ್ಲಿ ಮಾತನಾಡೋದನ್ನ ಬಿಟ್ಟು ಸ್ವದೇಶದಲ್ಲಿ ಮಾತನಾಡಲಿ. ಅದನ್ನ ಬಿಟ್ಟು ವಿದೇಶದಲ್ಲಿ ಯಾಕೆ ಮಾತನಾಡುತ್ತಾರೆ. ಬಿ.ಕೆ.ಹರಿಪ್ರಸಾದ್ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಚ್ಚರಿಕೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *