ಶಾಸಕ ಶ್ರೀರಾಮುಲು ಸೋದರಿ ಪುತ್ರಿಗೆ ಕಾಂಗ್ರೆಸ್ ನಾಯಕನ ಪುತ್ರನೊಂದಿಗೆ ವಿವಾಹ ನಿಶ್ಚಯ

ಬಳ್ಳಾರಿ: ಒಂದೆಡೆ ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಕೆಡವಲು ಶಾಸಕ ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಹರಸಾಹಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಶಾಸಕ ಶ್ರೀರಾಮುಲು ಸಹೋದರಿ ಕಾಂಗ್ರೆಸ್ ನಾಯಕನ ಕುಟುಂಬದೊಂದಿಗೆ ಬೀಗತನ ಮಾಡಿದ್ದಾರೆ.

ಶಾಸಕ ಶ್ರೀರಾಮುಲುರ ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಕಾಂಗ್ರೆಸ್ ನಾಯಕನ ಪುತ್ರನಿಗೆ ತಮ್ಮ ಪುತ್ರಿಯನ್ನು ಕೊಟ್ಟು ವಿವಾಹ ನಿಶ್ಚಯ ಮಾಡಿದ್ದಾರೆ. ಮಾಜಿ ಸಂಸದೆ ಜೆ.ಶಾಂತಾರ ಏಕೈಕ ಪುತ್ರಿ ಪ್ರಸನ್ನ ಲಕ್ಷಿಯನ್ನು ಕಾಂಗ್ರೆಸ್ ನಾಯಕ, ಪಾಲಿಕೆಯ ಮಾಜಿ ಸದಸ್ಯ ಬಿ.ಸೀನಾ (ಬ್ರಾಂಡಿಸೀನಾ)ರ ಪುತ್ರ ಪವನ್ ಕುಮಾರ್ ನೊಂದಿಗೆ ವಿವಾಹ ನಿಶ್ಚಿತ ಮಾಡಿಕೊಂಡಿದ್ದಾರೆ.

ಇದೇ ತಿಂಗಳು ಅಂದ್ರೆ ಅಕ್ಟೋಬರ್ 11ರಂದು ಬಳ್ಳಾರಿಯ ಅಲ್ಲಂ ಭವನದಲ್ಲಿ ವಿವಾಹ ಕಾರ್ಯ ನಡೆಯಲಿದೆ. ಮಾಜಿ ಸಂಸದೆ ಜೆ. ಶಾಂತಾರ ಪುತ್ರಿ ಹಾಗೂ ಕಾಂಗ್ರೆಸ್ ಮುಖಂಡ, ಪಾಲಿಕೆಯ ಮಾಜಿ ಸದಸ್ಯ ಬ್ರಾಂಡಿ ಸೀನಾರ ಪುತ್ರನ ವಿವಾಹ ಸಮಾರಂಭಕ್ಕೆ ಸ್ವತಃ ಶಾಸಕ ಶ್ರೀರಾಮುಲು ಹಾಗೂ ಕಾಂಗ್ರೆಸ್ ಎಂಎಲ್‍ಸಿ ಕೆ.ಸಿ.ಕೊಂಡಯ್ಯ ಆಮಂತ್ರಣದಲ್ಲಿ ಸುಖಾಗಮನ ಬಯಸಿರುವುದು ಮತ್ತೊಂದು ವಿಶೇಷವಾಗಿದೆ.

ಹೀಗಾಗಿ ಹೊರಗಡೆ ವಿರೋಧಿಗಳು ಒಳಗೊಳಗೆ ಬೀಗರು ಆಗುತ್ತಿರುವುದು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದಲ್ಲದೇ, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಯಾರೂ ಮಿತ್ರರಲ್ಲ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದಂತಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *