ಜೆಡಿಎಸ್ ಶಾಸಕನಿಂದ 15 ಸಾವಿರ ಕುಟುಂಬಕ್ಕೆ ದಿನಸಿ ವಿತರಣೆ – ವಿವಿಧ ಧಾನ್ಯಗಳ ಪ್ಯಾಕೇಜ್ ತಯಾರಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಾಕ್‍ಡೌನ್‍ನಿಂದ ಯಾವುದೇ ವಸ್ತುಗಳು ಸಿಗದೆ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಟಿ.ದಾಸರಹಳ್ಳಿ ಜೆಡಿಎಸ್ ಶಾಸಕ ಮಂಜುನಾಥ್ ಬರೋಬ್ಬರಿ 15 ಸಾವಿರ ಕುಟುಂಬಕ್ಕೆ ದಿನಸಿ ವಿತರಣೆ ಮಾಡಲು ಸಿದ್ಧರಾಗಿದ್ದಾರೆ.

ನೂರಾರು ಸ್ವಯಂ ಸೇವಕ ಯುವಕ-ಯುವತಿಯರ ತಂಡದಿಂದ ವಿವಿಧ ಧಾನ್ಯಗಳ ಪ್ಯಾಕೇಜ್ ತಯಾರಿ ಮಾಡಿಸುತ್ತಿದ್ದಾರೆ. ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿ ಇರುವುದರಿಂದ ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಶಾಸಕರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಅಕ್ಕಿ, ನಾಲ್ಕು ಬಗೆಯ ಬೇಳೆ ಕಾಳುಗಳು, ಅಡುಗೆ ಎಣ್ಣೆ, ಸೇರಿದಂತೆ ಇನ್ನಿತರ ಪದಾರ್ಥಗಳ ಪ್ಯಾಕೇಜ್ ಮಾಡಿ ಎಲ್ಲಾ ಹಸಿದ ಬಡ ಜನರ ಕುಟುಂಬಕ್ಕೆ ವಿತರಣೆ ಮಾಡಲಾಗುತ್ತಿದೆ.

ಈ ವೇಳೆ ಶಾಸಕ ಮಂಜುನಾಥ್ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ಈ ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಜನರು ಕಂಗಾಲಾಗಿದ್ದಾರೆ. ಲಾಕ್‍ಡೌನ್‍ನಿಂದ ಜನರು ಪರದಾಡುತ್ತಿದ್ದು, ಪಕ್ಷ ಭೇದ ಮರೆತು ಎಲ್ಲರಿಗೂ ದವಸ ಧಾನ್ಯಗಳನ್ನ ನೀಡುವ ತೀರ್ಮಾನಕ್ಕೆ ನಾವು ಹಾಗೂ ನಮ್ಮ ಮುಖಂಡರು ಬಂದಿದ್ದೇವೆ. ಹೀಗಾಗಿ ಉತ್ತಮ ಗುಣಮಟ್ಟದ ದಿನಸಿ ಧಾನ್ಯಗಳನ್ನ ತಂದು ಸರಿ ಸಮನಾಗಿ ಪ್ಯಾಕೆಟ್ ಮಾಡಿ ಹಸಿದವರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.

ಇಂತಹ ಲಾಕ್‍ಡೌನ್ ವೇಳೆ ನಮ್ಮ ಸ್ವಯಂ ಸೇವಕ ಯುವಕ-ಯುವತಿಯರು ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿ ಅಂತರವನ್ನ ಕಾಯ್ದುಕೊಂಡು ಎಲ್ಲಾ ಪದಾರ್ಥಗಳನ್ನ ಪ್ಯಾಕೆಟ್ ಮಾಡಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *