ರಮೇಶ್ ಜಾರಕಿಹೊಳಿಗೆ ‘ಕೈ’ ಕೊಟ್ಟರಾ ಮಹೇಶ್ ಕುಮಟಳ್ಳಿ

-ಬೈ ಎಲೆಕ್ಷನ್‍ನಲ್ಲಿ ಟ್ರಬಲ್ ಶೂಟರ್ ಚಮಕ್

ಧಾರವಾಡ: ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಕಾಣಿಸಿಕೊಳ್ಳುತ್ತಿದ್ದ ಶಾಸಕ ಮಹೇಶ್ ಕುಮಟಳ್ಳಿ ಇಂದು ದಿಡೀರ್ ಅಂತ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದಗಿನಿಂದಲೂ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಎಲ್ಲವೂ ಸರಿ ಇಲ್ಲ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಷ್ಟು ದಿನ ರಮೇಶ್ ಜಾರಕಿಹೊಳಿ ಬಣದಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಕಮಡೊಳ್ಳಿ ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್ ಜೊತೆ ಕಾಣಿಸಿಕೊಂಡು ಕುಸುಮಾ ಶಿವಳ್ಳಿ ಪರ ಮತಯಾಚನೆ ಮಾಡಿದರು.

ಬಂಡಾಯ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರಾದ ಮಹೇಶ್ ಕುಮಟಳ್ಳಿ, ನಾಗೇಂದ್ರ ಇದೀಗ ಡಿ.ಕೆ.ಶಿವಕುಮಾರ್ ಬಣದತ್ತ ವಾಲಿದ್ದರಿಂದ ರಮೇಶ್ ಜಾರಕಿಹೊಳಿ ಒಂಟಿಯಾದ್ರಾ ಎಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ್ ಕರೆದ ಸಭೆಗೂ ರಮೇಶ್ ಜಾರಕಿಹೊಳಿ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದರು.

ಇಂಗಳಗಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ವೇದಿಕೆ ಮೇಲೆ ಮಾತನಾಡುತ್ತಿದ್ದ ಡಿ.ಕೆ.ಶಿವಕುಮಾರ್, ಸಿ.ಎಸ್. ಶಿವಳ್ಳಿ ಅವರನ್ನು ಕಳೆದುಕೊಂಡಿರುವುದು ಮನಸ್ಸಿಗೆ ಬಹಳ ನೋವನ್ನು ತಂದಿದೆ. ಶಿವಳ್ಳಿ ಜಾತಿ ಧರ್ಮ ಬೇಧ ಭಾವ ಮಾಡಲಿಲ್ಲ. ನಿಮಗೆ ಯಾವತ್ತಾದ್ರೂ ಅವನು ಕಿರುಕುಳ ನೀಡಿದ್ದಾನಾ ಹೇಳಿ? ಪಾಪ ಶಿವಳ್ಳಿ ಪತ್ನಿ ಕುಸುಮಾ ಅವರು ಇಂದು ಚುನಾವಣೆಗೆ ನಿಂತಿದ್ದಾರೆ. ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಗೆಲ್ಲಿಸಿ ಮೈತ್ರಿ ಸರ್ಕಾರವನ್ನು ಬಲಗೊಳಿಸಿ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *