ಬಿಜೆಪಿ ಪಕ್ಷಕ್ಕೆ ಹೋಗುವ ಬಗ್ಗೆ ಶಾಸಕ ಬಿಸಿ ಪಾಟೀಲ್ ಸ್ಪಷ್ಟನೆ

– ಸಚಿವ ಸ್ಥಾನ ನನಗೆ ಕೊಡಲೇಬೇಕು

ಹಾವೇರಿ: ಮೈತ್ರಿ ಸರ್ಕಾರ ರಚನೆಯಾದ ನಂತರ ಕಾಂಗ್ರೆಸ್ ನ ಅತೃಪ್ತ ಶಾಸಕರು ಪಕ್ಷವನ್ನ ಬಿಟ್ಟು ಬೇರೆ ಪಕ್ಷಕ್ಕ ಹೋಗುವ ನಿರ್ಧಾರ ಮಾಡಿದ್ದಾರೆ ಅನ್ನೋ ಮಾತು ಹೆಚ್ಚು ಕೇಳಿಬರುತ್ತಿತ್ತು. ಈ ಬಗ್ಗೆ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ ಹಿರೇಕೆರೂರು ನಿವಾಸದಲ್ಲಿ ಶಾಸಕ ಬಿ.ಸಿ.ಪಾಟೀಲ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಸದ್ಯ ಬಿಜೆಪಿಯವರು ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ನನಗೆ ಸಚಿವ ಸ್ಥಾನ ಕೊಡಲೇಬೇಕು. ಸಚಿವನಾಗಲು ನನಗೆ ಎಲ್ಲ ಅರ್ಹತೆ ಇದೆ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ. ನನಗೆ ಅತೃಪ್ತರು ಯಾರು ಅನ್ನೋದೇ ಗೊತ್ತಿಲ್ಲ ಎಂದು ಹೇಳಿದ್ರು.

ಬಿಸಿ ಪಾಟೀಲ್ ಅವರು ಮುಂಬೈಗೆ ಹೋಗಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಈ ಕುರಿತು ಮಾತನಾಡಿದ ಅವರು, ನಾನು ಮುಂಬೈಗೆ ಹೋಗಬೇಕು ಅಂದಿದ್ದರೆ ನಾನು ಹಿರೇಕೆರೂರಿಗೆ ಬರುತ್ತಿರಲಿಲ್ಲ. ನಾನು ಕೊಲ್ಲಾಪುರಕ್ಕೆ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿದ್ದೆ. ಅತೃಪ್ತರು ಯಾರು ಹೋಗಿಲ್ಲ. ನಾನು ನಮ್ಮ ಸಹೋದರ ಹೋಗಿದ್ದೆವು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರೊಂದಿಗೆ ಪ್ರತಿದಿನ ಮಾತನಾಡುತ್ತಿರುತ್ತೇವೆ. ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಎಲ್ಲೂ ಬಿಡುಗಡೆ ಮಾಡಿಲ್ಲ. ಅಧಿಕೃತವಾಗಿಯೂ ಕೂಡ ಯಾರ ಹೆಸರನ್ನೂ ಹೇಳಿಲ್ಲ. ಸರ್ಕಾರ ಬೀಳುತ್ತೆ ಅಂತ ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಸರ್ಕಾರ ಬೀಳಲ್ಲ. ಇನ್ನು ಭದ್ರವಾಗಿದೆ. ನನ್ನ ಕ್ಷೇತ್ರದ ಜನರೇ ನನಗೆ ದೇವರು. ಅವರು ಹೇಳಿದ ರೀತಿ ನಾನು ಕೇಳುತ್ತೇವೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದ ನನಗೆ ಸಚಿವ ಸ್ಥಾನವನ್ನು ಕೊಡುತ್ತಾರೆ ಎಂದು ಬಿ.ಸಿ. ಪಾಟೀಲ್ ಅವರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *