ಮಾಜಿ ಶಾಸಕ ನರೇಂದ್ರಸ್ವಾಮಿಗೆ ಶಾಸಕ ಅನ್ನದಾನಿ ಬಹಿರಂಗ ಸವಾಲು

ಮಂಡ್ಯ: ಜಿಲ್ಲೆಯಲ್ಲಿ ದೋಸ್ತಿ ಕುಸ್ತಿ ಮತ್ತಷ್ಟು ಉಲ್ಬಣವಾಗಿದ್ದು, ಮೈತ್ರಿ ಧರ್ಮದ ಪಾಲನೆ ವಿಚಾರವಾಗಿ ಮಹದೇಶ್ವರ ಬೆಟ್ಟದಲ್ಲಿ ಪ್ರಮಾಣ ಮಾಡಲು ಬರುವಂತೆ ಶಾಸಕ ಅನ್ನದಾನಿ ಅವರು ಮಾಜಿ ಶಾಸಕ ನರೇಂದ್ರಸ್ವಾಮಿಗೆ ಸವಾಲು ಎಸೆದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಸ್ವಾಮಿ ಸುಮಲತಾ ಪರ ಪ್ರಚಾರ ಮಾಡದೆ ತಟಸ್ಥವಾಗಿದ್ದೆ ಎಂದು ಹೇಳುತ್ತಾರೆ. ಹಾಗೊಂದು ವೇಳೆ ಸುಮಲತಾ ಪರ ಚುನಾವಣಾ ಪ್ರಚಾರ ಮಾಡಿಯೇ ಇಲ್ಲ ಅನ್ನೋದಾದ್ರೆ ಮಲೈ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ. ನನ್ನ ಜೊತೆ ಬರಲು ಸಾಧ್ಯವಿಲ್ಲ ಅನ್ನೋದಾದ್ರೆ ಅವರೇ ಹೋಗಿ ಪ್ರಮಾಣ ಮಾಡಿ ಬರಲಿ. ಆ ಬಳಿಕ ನಾನು ಹೋಗಿ ಪ್ರಮಾಣ ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ.

ಯಾವಾಗಲೂ ದೇವರ ಮೇಲಿನ ಭಕ್ತಿಯಿಂದ ಹಣೆ ಮೇಲೆ ಬೊಟ್ಟು ಇಡುತ್ತಾರೆ ಅದಕ್ಕಾದರೂ ಬೆಲೆ ಬರಲಿ. ಸುಮಲತಾ ಪರ ಪ್ರಚಾರ ಮಾಡಿಲ್ಲ ಎಂದರೆ ಗ್ರಾಮಪಂಚಾಯಿತಿ ಮಟ್ಟದ ಕಾರ್ಯಕರ್ತರ ಸಭೆ ಏಕೆ ಕರೆಯಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ನಾವು ಗುಲಾಮಗಿರಿ ರಾಜಕೀಯ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಯಾರು ಗುಲಾಮಗಿರಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಾಬೀತು ಪಡಿಸಲಿ. ರಾಜಕಾರಣಿಗಳೆಲ್ಲರೂ ಮತದಾರರ ಗುಲಾಮರು. ಇವರು ಯೋಜನೆ ಸರಿಯಾಗಿ ರೂಪಿಸದೇ ಅಧಿಕಾರಿಗಳು ಕೆಲಸ ನಿಲ್ಲಿಸಿದರೆ ನಾನೇ ನಿಲ್ಲಿಸಿದೆ ಅಂತಾರೆ. ಭೀಮಾನದಿ ಕಾಮಗಾರಿಯ ಯೋಜನೆ ಹೊನ್ನಗನಹಳ್ಳಿಯಿಂದ ಏಕೆ ತರಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.

ಸಚಿವ ಡಿಕೆಶಿ ಅವರು ನೀರಾವರಿ ಯೋಜನೆ ರೂಪಿಸಿ ಮಳವಳ್ಳಿಯಿಂದ ನೀರು ತೆಗೆದುಕೊಂಡು ಹೋಗಿದ್ದಾರೆ. ಆ ಯೋಜನೆಯಲ್ಲೇ ನಮ್ಮ ಭಾಗದ ಹಳ್ಳಿಗೆ ನೀರು ತರಬಹುದಿತ್ತು. ಏಕೆ ಮಾಡಲಿಲ್ಲ ಎಂದು ಶಾಸಕರು ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *