ನಿಖಿಲ್ ಮದ್ವೆಗಾಗಿ ಜನರಿಗೆ ಯಾವುದೇ ಗಿಫ್ಟ್ ನೀಡ್ತಿಲ್ಲ, ಅದೆಲ್ಲವೂ ಸುಳ್ಳು: ಅನಿತಾ ಕುಮಾರಸ್ವಾಮಿ

ರಾಮನಗರ: ಪುತ್ರ ನಿಖಿಲ್ ಮತ್ತು ರೇವತಿ ಮದುವೆಗೆ ನಾವು ರಾಮನಗರ, ಚನ್ನಪಟ್ಟಣ ಕ್ಷೇತ್ರದ ಕುಟುಂಬಗಳಿಗೆ ಯಾವುದೇ ಉಡುಗೊರೆಯನ್ನು ನೀಡುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ, ಬೆಂಗಳೂರಿನ ಬದಲು ರಾಮನಗರ ಜಿಲ್ಲೆಯಲ್ಲೇ ಸರಳವಾಗಿ ಮದುವೆ ಮಾಡುತ್ತಿದ್ದೇವೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಅವರು, ನಿಖಿಲ್ ಮದುವೆಗೆ ಕ್ಷೇತ್ರದ ಮತದಾರರಿಗೆ ರೇಷ್ಮೆ ಸೀರೆ, ಪಂಚೆ ನೀಡುತ್ತಿದ್ದೇವೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಇದೆಲ್ಲಾ ಸತ್ಯಕ್ಕೆ ದೂರವಾಗಿದೆ. ಈ ರೀತಿ ಯಾರು ಹಬ್ಬಿಸುತ್ತಿದ್ದಾರೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ನಿಖಿಲ್ ನಿಶ್ಚಿತಾರ್ಥಕ್ಕೆ ತಂದಿದ್ದ ಹಾರದ ಕಥೆ ಹೇಳಿದ ಎಚ್.ವಿಶ್ವನಾಥ್

ಆಹ್ವಾನ ಪತ್ರಿಕೆಯನ್ನು ಸರಳವಾಗಿ ಪ್ರಿಂಟ್ ಮಾಡಿಸಿದ್ದೇವೆ. ಅದಕ್ಕೇನೂ ಸಾವಿರಾರು ರೂಪಾಯಿ ಖರ್ಚು ಮಾಡಿಲ್ಲ. ಇಲ್ಲಿಯೇ ಮದುವೆ ಮಾಡಬೇಕು ಎಂಬ ಇಚ್ಛೆ ನನಗೂ, ಕುಮಾರಸ್ವಾಮಿಗೂ ಇತ್ತು. ಈ ಹಿನ್ನೆಲೆಯಲ್ಲಿ ಅಧಿಕ ಜನರು ಸೇರುತ್ತಾರೆ ಎಂದು ಅದಕ್ಕಾಗಿ ವಿಶಾಲವಾದ ಸ್ಥಳಬೇಕು ಎಂಬ ದೃಷ್ಟಿಯಿಂದ ಇಲ್ಲಿ ಮದುವೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯ ಬಜೆಟ್ ಅನ್ನು ಟೀಕಿಸಿದ ಅವರು, ರೈತರ ಸಾಲಮನ್ನಾ ಯೋಜನೆ ಕೈ ಬಿಟ್ಟಿದ್ದಕ್ಕೆ ಬೇಸರವಾಗಿದೆ. ಸಿಎಂ ಯಡಿಯೂರಪ್ಪ ತಮ್ಮದು ರೈತ ಪರ ಸರ್ಕಾರದ ಬಜೆಟ್ ಎಂದು ಬಜೆಟ್ ಮಂಡಿಸುವಾಗ ಹಸಿರು ಶಾಲು ಹಾಕಿಕೊಂಡು ಬಜೆಟ್ ಮಂಡಿಸಿದರು. ಆದರೆ ಮಾಜಿ ಸಿಎಂ ಕುಮಾರಸ್ವಾಮಿಯವರ ರೈತರ ಸಾಲಮನ್ನಾ ಯೋಜನೆಯನ್ನು ಕೈ ಬಿಟ್ಟಿದ್ದಾರೆ. ಅದು ಸರಿಯಲ್ಲ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ಬಜೆಟ್ ಮಂಡಿಸಿದ್ದಾರೆ. ಅಲ್ಲದೇ ಎಚ್‍ಡಿಕೆ ಯೋಜನೆಗಳಿಗೂ ಬ್ರೇಕ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *