ಸಚಿವ ಸ್ಥಾನ ಕೇಳುವುದು ನನ್ನ ಹಕ್ಕು: ಶಾಸಕ ಮಾಮನಿ

-ಸೋತವರಿಗೆ ಸಚಿವ ಸ್ಥಾನ ಕೊಟ್ಟರೆ ಹೇಗೆ?

ಬೆಳಗಾವಿ: ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಉನ್ನತ ಹುದ್ದೆ ಸಿಗುತ್ತಿಲ್ಲ. ಅದಕ್ಕಾಗಿ ಸವದತ್ತಿಗೆ ಸಚಿವ ಸ್ಥಾನ ನೀಡಬೇಕು, ಅದನ್ನ ಕೇಳುವುದು ನನ್ನ ಹಕ್ಕು ಎಂದು ಸವದತ್ತಿ ಎಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ ಹೇಳಿದ್ದಾರೆ.

ಜಿಲ್ಲೆಯ ಸವದತ್ತಿಯಲ್ಲಿ ಮಾತನಾಡಿದ ಅವರು, ನನ್ನ ತಂದೆ ವಿಧಾಸಭೆಯಲ್ಲಿ ಉಪಾಧ್ಯಕ್ಷರಾಗಿದ್ದರು. ಅದನ್ನಾದರೂ ಕೊಡಿ ಎಂದು ಹೇಳಿದ್ದೇನೆ ಎಂದರು.

ಯಾವುದೇ ಸರ್ಕಾರ ಬಂದರೂ ಬೆಳಗಾವಿ ಜಿಲ್ಲೆಗೆ ಉನ್ನತ ಹುದ್ದೆ ಲಭಿಸುತ್ತದೆ ಎಂದು ಹೇಳುತ್ತಾರೆ. ಆದರೆ ಚಿಕ್ಕೋಡಿಗೆ ಮಾತ್ರ ಸಿಂಹ ಪಾಲನ್ನು ನೀಡಿರುವುದಕ್ಕೆ ನಾನು ಇದೆಂಥ ವಿಪರ್ಯಾಸ ಎಂದು ಟ್ವೀಟ್ ಮಾಡಿದ್ದೇನೆ. ಆದರೆ ಬೆಳಗಾವಿ ಗ್ರಾಮೀಣ ಜಿಲ್ಲೆಯ ಶಾಸಕರಿಗೆ ಯಾವುದೇ ಉನ್ನತ ಸ್ಥಾನ ಲಭಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕೋಡಿ ಹೊರತು ಪಡಿಸಿ ಉಳಿದವರಿಗೆ ಸಚಿವ ಸ್ಥಾನ ಕೊಡಿ ಎನ್ನುವ ಅರ್ಥದಲ್ಲಿ ನಾನು ಟ್ವೀಟ್ ಮಾಡಿದ್ದೇನೆ. ಡಿಸಿಎಂ ಲಕ್ಷ್ಮಣ ಸವದಿ ಅವರು ಕೂಡಾ ಚಿಕ್ಕೋಡಿ ಭಾಗದಿಂದ ಬಂದಿದ್ದವರು. ಅವರು ಸೋತರೂ ಅವರಿಗೆ ಸ್ಥಾನ ಕೊಟ್ಟಿದ್ದು ಪಕ್ಷದ ನಿರ್ಧಾರ. ಮುಂದೆ ಅವರು ವಿಧಾನ ಪರಿಷತ್ ಸದಸ್ಯರಾಗಿ ಡಿಸಿಎಂ ಆಗಿಯೇ ಮುಂದುವರಿಯಲಿದ್ದಾರೆ ಎಂದು ಹೇಳಿದರು.

ನಾನು ಪಕ್ಷಕ್ಕೆ ಹಾಗೂ ವರಿಷ್ಠರಿಗೆ ಒತ್ತಡ ಹಾಕುವ ಪ್ರಯತ್ನ ಮಾಡಿಲ್ಲ ಎಂದ ಅವರು, ನಾನು ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ ಕಟೀಲ್ ಹಾಗೂ ವರಿಷ್ಠರಾದ ಸಂತೋಷಜಿ ಅವರನ್ನು ಕೂಡ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *