ಡಿಕೆಶಿಗೆ ಏನೇ ಆದ್ರೂ ಇಡಿ, ಕೇಂದ್ರ ಸರ್ಕಾರ ಕಾರಣ: ಮಿಥುನ್ ರೈ

ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಏನಾದ್ರು ಆದರೆ ಇಡಿ ಮತ್ತು ಕೇಂದ್ರ ಸರ್ಕಾರಕ್ಕೆ ಕಾರಣ ಎಂದು ಮಂಗಳೂರಿನ ಕಾಂಗ್ರೆಸ್ ನಾಯಕ ಮಿಥುನ್ ರೈ ಎಚ್ಚರಿಕೆ ನೀಡಿದ್ದಾರೆ.

ಆರ್‍ಎಂಎಲ್ ಆಸ್ಪತ್ರೆಯ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಥುನ್ ರೈ, ನಮ್ಮ ನಾಯಕರನ್ನು ಭೇಟಿಯಾಗಲು ದೆಹಲಿಯ ಪೊಲೀಸರು ಅನುಮತಿ ನೀಡುತ್ತಿಲ್ಲ. ಆಸ್ಪತ್ರೆಯೊಳಗೆ ಸಹ ಬಿಡುತ್ತಿಲ್ಲ. ಕಾಂಗ್ರೆಸ್ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ಧೃವ ನಾರಾಯಣ್, ಉಗ್ರಪ್ಪ ರಸ್ತೆಯಲ್ಲಿ ಕಾಯುವಂತಾಗಿದೆ. ಇದು ಕರ್ನಾಟಕ ಅಲ್ಲ, ದೆಹಲಿ ಎಂದು ಪೊಲೀಸರು ಹೇಳುತ್ತಿದ್ದು, ಇಡಿ ಅನುಮತಿ ತಂದರೆ ಆಸ್ಪತ್ರೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಇಡಿ ಅಧಿಕಾರಿಗಳು ಆರ್‍ಎಂಎಲ್ ವೈದ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಬಿಪಿ ನಿಯಂತ್ರಣಕ್ಕೆ ಬರಬೇಕಿದೆ. ಸಣ್ಣದಾಗಿ ಎದೆ ನೋವು ಸಹ ಕಾಣಿಸಿಕೊಂಡಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇಡಿ ಅಧಿಕಾರಿಗಳು ನಾರ್ಮಲ್ ರಿಪೋರ್ಟ್ ನೀಡಿ ಡಿಸ್ಚಾರ್ಜ್ ಮಾಡಬೇಕೆಂದು ವೈದ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸೋದರ ಡಿ.ಕೆ.ಸುರೇಶ್ ಮತ್ತು ಬಾಮೈದ ಡಾ.ರಂಗನಾಥ್ ಅವರನ್ನು ಸಹ ಭೇಟಿಯಾಗಲು ಬಿಡುತ್ತಿಲ್ಲ. ರಂಗನಾಥ್ ಸಹ ಓರ್ವ ವೈದ್ಯರಾಗಿದ್ದು, ಡಿಕೆಶಿಯವರ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಮಿಥುನ್ ರೈ ಕಿಡಿಕಾರಿದರು.

ಡಿಕೆ ಶಿವಕುಮಾರ್ ಅವರು ವಿಚಾರಣೆಗೆ ಸಹಕರಿಸಿದ್ದಾರೆ. ಆದ್ರೆ ಅಧಿಕಾರಿಗಳು ಕೇಂದ್ರ ಸರ್ಕಾರ ಮತ್ತು ಅಮಿತ್ ಶಾ ಅವರ ಕೈಗೊಂಬೆ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಮಿಥುನ್ ರೈ ಆರೋಪಿಸಿದರು.

Comments

Leave a Reply

Your email address will not be published. Required fields are marked *