ಉದ್ದೇಶಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಿದ್ದಾರೆ: ಸುಮಲತಾ

– ದರ್ಶನ್, ಯಶ್ ಬೆಂಬಲ ನೋಡಿ ಹೆದರಿದ್ದಾರೆ

ಮಂಡ್ಯ: ಉದ್ದೇಶಪೂರ್ವಕವಾಗಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದ್ದಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪ ಸಮುದ್ರ ಗ್ರಾಮದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಬೇಕಂತಲೇ ಉದ್ದೇಶ ಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನನ್ನ ಬೆಂಬಲಕ್ಕೆ ದರ್ಶನ್ ಹಾಗೂ ಯಶ್ ನಿಂತಿರುವುದು ನೋಡಿ ಹೆದರಿಕೊಂಡಿದ್ದಾರೆ. ಹಾಗಾಗಿ ಈ ರೀತಿ ಮಾಡಿದ್ದಾರೆ. ಈ ಮಟ್ಟಕ್ಕೆ ಮಾಡ್ತಿರೋ ರಾಜಕಾರಣ ಮನಸ್ಸಿಗೆ ನೋವು ತಂದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದರ್ಶನ್ ಹಾಗೂ ಯಶ್ ಬರುತ್ತಿರುವುದಕ್ಕೆ ಹೆದರಿ ಈ ರೀತಿ ದಾಳಿ ಮಾಡಿದ್ದಾರೆ. ದಾಳಿ ಮಾಡುವ ಮೂಲಕ ದರ್ಶನ್ ಹಾಗೂ ಯಶ್‍ರನ್ನು ಹೆದರಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಅವರು ಹೆದರೋದಿಲ್ಲ. ಅಭಿಮಾನಿಗಳು ಯಾವುದೇ ಕಾರಣಕ್ಕೂ ಪ್ರವೋಕ್ ಆಗಬೇಡಿ. ಏಕೆಂದರೆ ಯಾರು ಏನೇ ಮಾಡಿದ್ರೂ ಫಲಿತಾಂಶದಲ್ಲಿ ಉತ್ತರ ಸಿಗುತ್ತದೆ. ನಾವು ಅವರಂತೆ ಮಾಡೋದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಏನಿದು ಘಟನೆ?
ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ಮನೆ ಹಾಗೂ ಕಚೇರಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಇಂದು ಬೆಳಗ್ಗಿನ ಜಾವ 3 ಗಂಟೆಗೆ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಈ ಘಟನೆ ನಡೆದಾಗ ದರ್ಶನ್ ಮನೆಯಲ್ಲಿ ಇರಲಿಲ್ಲ. ದರ್ಶನ್ ಗಿರಿನಗರದಲ್ಲಿ ಇರುವ ತಮ್ಮ ಪತ್ನಿ ವಿಜಯಲಕ್ಷ್ಮಿ ಫ್ರೆಸ್ಟಿಜ್ ಅಪಾರ್ಟ್‍ಮೆಂಟ್‍ನಲ್ಲಿ ಇದ್ದರು.

ಒಬ್ಬನೇ ವ್ಯಕ್ತಿ ಬಂದು ಮನೆ ಮೇಲೆ ಕಲ್ಲು ಎಸೆದಿದ್ದಾನೆ. ಅಲ್ಲದೆ ಮನೆ ಮುಂದೆ ಇದ್ದ ಬ್ಯಾನರ್ ಕೂಡ ಹರಿದ ಹಾಕಿದ್ದಾನೆ. ಈ ವೇಳೆ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಹೊರತುಪಡಿಸಿ ಯಾರೂ ಇರಲಿಲ್ಲ. ಕಲ್ಲು ಬಿದ್ದ ಶಬ್ದ ಕೇಳಿ ವಾಚ್‍ಮೆನ್ ಹೊರಬರ್ತಿದ್ದಂತೆ ದುಷ್ಕರ್ಮಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ರಾಜರಾಜೇಶ್ವರಿ ನಗರ ಪೊಲೀಸರು, ಕೆಂಗೇರಿ ಎಸಿಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *