ಸಿಎಂ ಬೇಜಾರಾದ್ರೆ ನಾವೇನ್ ಮಾಡೋಕೆ ಆಗುತ್ತೆ: ಮಂಡ್ಯ ‘ಕೈ’ ಮುಖಂಡರ ಪರ ಜಮೀರ್ ಬ್ಯಾಟಿಂಗ್

ಬೆಂಗಳೂರು: ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತದಾನ ಮುಗಿದ ಬಳಿಕ ಸುಮಲತಾ ಅವರ ಜೊತೆ ಊಟಕ್ಕೆ ಹೋಗಿದ್ದಾರೆ. ಇದಕ್ಕೆ ಸಿಎಂ ಕುಮಾರಸ್ವಾಮಿಯವರು ಬೇಜಾರು ಮಾಡಿಕೊಂಡರೆ ನಾವೇನು ಮಾಡಲು ಆಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇಂದು ಮಾಜಿ ಶಾಸಕ ಚಲುವರಾಯ ಸ್ವಾಮಿ ಅವರಿಗೆ ತುರ್ತು ಬುಲಾವ್ ನೀಡಿದ್ದರು. ಈ ಹಿನ್ನಲೆಯಲ್ಲಿ ಆಗಮಿಸಿದ್ದ ಮಾಜಿ ಶಾಸಕರಿಗೆ ಸಾಥ್ ನೀಡಿದ್ದ ಜಮೀರ್ ಅಹಮ್ಮದ್ ಅವರು ಮಾತನಾಡಿ, ಊಟಕ್ಕೆ ಹೋಗುವುದು ತಪ್ಪಲ್ಲ. ಯಾರೇ ಕರೆದರೂ ಊಟಕ್ಕೆ ಹೋಗುತ್ತಾರೆ. ನನ್ನನ್ನು ಕರೆದರೂ ನಾನು ಊಟಕ್ಕೆ ಹೋಗುತ್ತೇನೆ. ಬರ್ತ್‍ಡೇ ಪಾರ್ಟಿ ಅಂತ ಹೋಗಿದ್ದಾರೆ. ಮಂಡ್ಯ ನಾಯಕರು ಹೋಗಿದ್ದ ಪಾರ್ಟಿಗೆ ಸುಮಲತಾ ಅಂಬರೀಶ್ ಅವರು ಬರುತ್ತಾರೆ ಅಂತ ಯಾರಿಗೂ ಗೊತ್ತಿರಲಿಲ್ಲ. ಇದರಲ್ಲಿ ತಪ್ಪೇನಿದೆ ಎಂದು ಮಂಡ್ಯ ಮುಖಂಡರ ಪರ ಬ್ಯಾಟ್ ಬೀಸಿದರು.

ಮಂಡ್ಯ ಉಪ ಚುನಾವಣೆಯಲ್ಲಿ ಎಲ್ಲರನ್ನೂ ಕರೆಸಿ ಸಿಎಂ ಮಾತನಾಡಿದ್ದರು. ಆದರೆ ಈ ಚುನಾವಣೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡಿಲ್ಲ. ಎಲ್ಲರನ್ನೂ ಕರೆದು ಮಾತನಾಡಿದ್ದರೆ ಸರಿ ಆಗುತಿತ್ತು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರ ವಿರುದ್ಧ ದೂರಿದರು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋಲುವ ಪ್ರಶ್ನೆಯೇ ಬರುವುದಿಲ್ಲ. ಅವರು ಕನಿಷ್ಠ 1.5 ಲಕ್ಷ ಮತಗಳ ಅಂತರದಿಂದ ಜಯ ಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *