ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಭಾರತದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌ ಆಗುತ್ತಿದ್ದಾರೆ.

ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ವಿದ್ಯಾರ್ಥಿಯನ್ನು ಪೋಲೆಂಡ್‌ ದೇಶದಲ್ಲಿ ಕೇಂದ್ರ ಸಚಿವ ವಿ.ಕೆ.ಸಿಂಗ್‌ ಅವರು ಭೇಟಿಯಾಗಿದ್ದಾರೆ. ಅಲ್ಲದೇ ʼಆಪರೇಷನ್‌ ಗಂಗಾʼ ಕಾರ್ಯಾಚರಣೆಯಡಿ ವಿದ್ಯಾರ್ಥಿಯನ್ನು ಭಾರತಕ್ಕೆ ವಾಪಸ್‌ ಕರೆತರಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಯಿ ಬಿಡದಿದ್ದರೆ ನಾನು ಭಾರತಕ್ಕೆ ಬರುತ್ತಿರಲಿಲ್ಲ: ರಂಜಿತ್ ರೆಡ್ಡಿ

ಸ್ಟ್ರೆಚರ್‌ನಲ್ಲಿದ್ದ 31 ವರ್ಷದ ವಿದ್ಯಾರ್ಥಿಯೊಂದಿಗೆ ಸಿಂಗ್‌ ಅವರು ರ್ಜೆಸ್ಜೋವ್‌ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಭರವಸೆ ನೀಡುತ್ತೇನೆ. ಆತ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗುವುದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ. ಬಹುಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಸಿಂಗ್‌ ತಿಳಿಸಿದ್ದಾರೆ.

ವಿದ್ಯಾರ್ಥಿ ಹರ್ಜೋತ್‌ ಸಿಂಗ್‌ ಪ್ರಯಾಣಿಸುವ ವಿಮಾನ ರಾತ್ರಿ 7 ಗಂಟೆಗೆ ದೆಹಲಿ ತಲುಪಲಿದೆ. ಆತನೊಂದಿಗೆ 200 ಮಂದಿ ಭಾರತೀಯರು ಪೋಲೆಂಡ್‌ನಿಂದ ಪ್ರಯಾಣ ಬೆಳೆಸಲಿದ್ದಾರೆ. ಸದ್ಯ ವಿದ್ಯಾರ್ಥಿ ಉಕ್ರೇನ್‌ನಿಂದ ಪೋಲೆಂಡ್‌ಗೆ ಬಂದಿದ್ದಾರೆ. ಇದನ್ನೂ ಓದಿ:  ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

ಕೀವ್‌ನಲ್ಲಿ ಭಾರತದ ಹರ್ಜೋತ್‌ ಸಿಂಗ್‌ಗೆ ಗುಂಡೇಟು ಬಿದ್ದಿತ್ತು. ಈ ವೇಳೆ ಆತ ತನ್ನ ಪಾಸ್‌ಪೋರ್ಟ್‌ ಕೂಡ ಕಳೆದುಕೊಂಡಿದ್ದಾರೆ. ಹರ್ಜೋತ್‌ ನಾಳೆ ನಮ್ಮೊಂದಿಗೆ ಭಾರತವನ್ನು ತಲುಪುತ್ತಿದ್ದಾರೆ ಎಂದು ತಿಳಿಸಲು ಸಂತೋಷವಾಗಿದೆ ಎಂದು ಸಚಿವ ಟ್ವೀಟ್‌ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *