ಅಬಕಾರಿ ಅಧಿಕಾರಿಗಳಿಗೆ ಸಚಿವ ರೇವಣ್ಣ ಖಡಕ್ ಸೂಚನೆ

ಹಾಸನ: ಅಕ್ರಮ ಮದ್ಯ ಮಾರಾಟ ಕೂಡಲೇ ತಡೆಗಟ್ಟಬೇಕು ಎಂದು ಲೋಕೋಪಯೋಗಿ ಸಚಿವ ರೇವಣ್ಣ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ತಡೆಗಟ್ಟಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಇವತ್ತು ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಬಡವರಿಗೆ ಕಷ್ಟಕೊಡುತ್ತಿದ್ದಾರೆ. ಒಂದು ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಂಡಿಲ್ಲ ಎಂದರೆ ಬೆಂಗಳೂರಿನಿಂದಲೇ ವಿಶೇಷ ತಂಡ ಕರೆಸುವೆ ಎಂದು ಅಬಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಹಳ್ಳಿಯಲ್ಲಿ ಎಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೋ ಅವರನ್ನು ಒಂದು ವಾರದಲ್ಲಿ ಪತ್ತೆಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯಾರ ಅಂಗಡಿಯಿಂದ ಮದ್ಯ ಹೋಗಿರುತ್ತದೋ ಅಂತಹ ಅಂಗಡಿಯನ್ನು 30 ದಿನ ಸೀಜ್ ಮಾಡಿಸುತ್ತೇನೆ. ಬಳಿಕ ಅಂಗಡಿಯ ಪರವಾನಿಗೆಯನ್ನು ಕ್ಯಾನ್ಸಲ್ ಮಾಡಿಸುತ್ತೇನೆ. ಒಂದು ವೇಳೆ ಇಲ್ಲಿನ ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದರೆ ಬೆಂಗಳೂರಿನಿಂದ ಅಧಿಕಾರಿಗಳನ್ನು ಕಳುಹಿಸಬೇಕಾಗುತ್ತದೆ ಎಂದರು.

ಪರವಾನಗಿ ಇದ್ದರೆ ಮಾರಾಟ ಮಾಡಲು ಅಭ್ಯಂತರವಿಲ್ಲ. ಆದರೆ ಗ್ರಾಮೀಣ ಭಾಗದ ಬಡವರಿಗೆ ತೊಂದರೆಯಾಗಬಾರದು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಅವರು ಪ್ರತಿದಿನ ಕುಡಿದು ಹೆಂಡತಿ, ಮಕ್ಕಳಿಗೆ ಹೊಡೆಯುವುದು ಇದೆಲ್ಲ ಆಗಬಾರದು. ಈಗಾಗಲೇ ನಾನು ಎಸ್‍ಪಿ ಅವರಿಗೂ ಹೇಳಿದ್ದೇನೆ. ಅಬಕಾರಿ ಅಧಿಕಾರಿಗಳ ಜೊತೆಗೆ ಪೊಲೀಸರೂ ಕಾರ್ಯ ಪ್ರವೃತ್ತರಾಗಬೇಕು. ಜನರು ನೆಮ್ಮದಿಯಿಂದ ಇರಬೇಕು ಅಷ್ಟೇ ಎಂದು ರೇವಣ್ಣ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *