ನಾನು ಆರು ಬಾರಿ ಶಾಸಕನಾಗಲು ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವೇ ಕಾರಣ : ರಮಾನಾಥ ರೈ

ಮಂಗಳೂರು: ಅರಣ್ಯ ಸಚಿವ ರಮಾನಾಥ ರೈ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಾರೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಆದರೆ ಈಗ ಸ್ವತಃ ರಮಾನಾಥ ರೈ ಅವರೇ ತಾವು ಮುಸ್ಲಿಂ ಮತದಿಂದ ಗೆದ್ದು ಬಂದಿದ್ದು ಅವರ ಋಣ ತೀರಿಸಲು ಜನ್ಮ ಜನ್ಮಾಂತರಗಳಿಂದಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತು ಅಲ್ಲಾಹುವಿನ ಕೃಪೆಯಿಂದ ಬಂಟ್ವಾಳ ಕ್ಷೇತ್ರದಲ್ಲಿ ನನಗೆ ಆರು ಬಾರಿ ಶಾಸಕನಾಗಲು ಸಾಧ್ಯವಾಗಿದೆ. ಅದಕ್ಕೆ ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವು ಕಾರಣ. ತಮ್ಮ ಸಮುದಾಯದ ವ್ಯಕ್ತಿ ಕಣಕ್ಕೆ ನಿಂತಿದ್ದಾರೆಂದು ಹತ್ತು-ಹದಿನೈದು ಸಾವಿರ ಮಂದಿ ಮತ ಹಾಕುತ್ತಿದ್ದರೆ, ಈ ರಮಾನಾಥ ರೈ ಯಾವತ್ತೋ ಮಾಜಿಯಾಗುತ್ತಿದ್ದ. ಯಾವುದೇ ಧರ್ಮ, ಜಾತಿ ಮಿತಿಗೆ ಒಳಗಾಗದೇ ನೀವು ಮತ ಹಾಕುತ್ತಿದ್ದೀರಿ. ನಿಮ್ಮ ಋಣ ತೀರಿಸಲು ನನಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಹೇಳಿದರು.

ಸಚಿವ ರಮಾನಾಥ ರೈ ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಮೂಲಕ ರೈ ಅವರು ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು ಹಾಗಾದರೆ ರಮಾನಾಥ ರೈ ಅವರು ಕೇವಲ ಮುಸ್ಲಿಮರ ವೋಟಿನಿಂದಷ್ಟೇ ಗೆದ್ದು ಬಂದಿದ್ದರಾ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

https://www.youtube.com/watch?v=PJ8h1JAxwDk

Comments

Leave a Reply

Your email address will not be published. Required fields are marked *