ನನ್ ಹತ್ರ ಉಲ್ಟಾ ಪಲ್ಟಾ ನಡೆಯಲ್ಲ- ಅಧಿಕಾರಿಗಳಿಗೆ ಸಚಿವ ಚವ್ಹಾಣ್ ಖಡಕ್ ವಾರ್ನಿಂಗ್

ಬೀದರ್: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಪ್ಲ್ಯಾನಿಂಗ್ ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿದರೆ ಕೆಳ ಹಂತದ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಆದರೆ ನೀವು ಮಾತ್ರ ನಗರದಲ್ಲೇ ಇದ್ದು ಕೆಲ ಮಾಡುತ್ತೀರಿ ಎಂದು ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಈ ವೇಳೆ ಸಬೂಬು ನೀಡಲು ಬಂದ ಅಧಿಕಾರಿಗಳ ವಿರುದ್ಧ ಗುಡುಗಿದ ಸಚಿವರು, ನನ್ನ ಹತ್ತಿರ ಉಲ್ಟಾ ಪಲ್ಟಾ ನಡೆಯಲ್ಲ. ಎಲ್ಲಾ ತಾಲೂಕು ಕೇಂದ್ರಗಳಿಗೆ ನೀವು ದಿಢೀರ್ ಭೇಟಿ ನೀಡಬೇಕು. ಅಭಿವೃದ್ಧಿ ಕೆಲಸಗಳು ಆಗಬೇಕು. ಆಗಿದ್ದು ಜನರಿಗೆ ಕಾಣಬೇಕು. ಮಾತಿನಿಂದ ಏನೂ ಆಗಲ್ಲ. ಮಾಡುತ್ತೇನೆ ಎಂದು ಹೇಳಿ ಜಾರಿಕೊಂಡರೆ ನನ್ನ ಹತ್ತಿರ ನಡೆಯಲ್ಲ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ನೀವು ಕುರ್ಚಿ ಬಿಟ್ಟು ತಾಲೂಕು ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ ಮಾತ್ರ ನಾನು ನಿಮ್ಮನ್ನು ಪ್ರೀತಿಯಿಂದ ಕಾಣುತ್ತೇನೆ ಎಂದು ಹೇಳಿದರು. ಇದಕ್ಕೂ ಮೊದಲು ಬ್ರೀಮ್ಸ್ ಆಸ್ಪತ್ರೆಗೆ ರೋಗಿಗಳು ಬಂದ್ರೆ ಹೈದರಾಬಾದ್ ಹಾಗೂ ಸೊಲ್ಲಾಪುರ್‍ಗೆ ಕಳಿಸುತ್ತಾರೆ ಎಂಬ ಜನರ ಆರೋಪದ ಬಗ್ಗೆ ಮಾತನಾಡಿದ ಸಚಿವರು, ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಬೇಕು. ಈ ಮೂಲಕ ಹೈದ್ರಾಬಾದ್, ಸೊಲ್ಲಾಪುರ ಮುಕ್ತ ಬೀದರ್ ಆಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು.

Comments

Leave a Reply

Your email address will not be published. Required fields are marked *