ಸಾರ್ವಜನಿಕರಿಗೆ ತೊಂದ್ರೆ ಆಗಲ್ವಾ? ಇನ್ಮುಂದೆ ಹಿಂಗ್ ಆಗಬಾರ್ದು: ಎಂಬಿ ಪಾಟೀಲ್ ಗರಂ

ಬೆಂಗಳೂರು: ಝೀರೋ ಟ್ರಾಫಿಕ್‍ನಿಂದ ಸಾರ್ವಜನಿಕರಿಗೆ ತೊಂದರೆ ಆಗಲ್ವಾ? ಇನ್ನು ಮುಂದೆ ಹೀಗೆ ಆಗಬಾರದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಪೊಲೀಸ್ ಅಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ.

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತಿಮ ದರ್ಶನಕ್ಕೆ ತೆರಳುವ ವೇಳೆ ಗೃಹ ಸಚಿವರಿಗೆ ಗೊತ್ತಿಲ್ಲದೇ ಡಿಸಿಪಿ ಸಾರಾ ಫಾತಿಮಾ ಅವರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು. ಎಂ.ಬಿ.ಪಾಟೀಲ್ ಕಾರಲ್ಲಿ ತೆರಳುವ ವೇಳೆ, ರಸ್ತೆ ಖಾಲಿ ಖಾಲಿ ಇತ್ತು. ಇದ್ಯಾಕೆ ಹೀಗೆ ಅಂತ ಸಾರಾ ಫಾತಿಮಾ ಅವರನ್ನು ಪ್ರಶ್ನಿಸಿದ್ದಾರೆ. ಸಚಿವರು ಕೇಳುತ್ತಿದ್ದಂತೆ ಉತ್ತರಿಸಿದ ಸಾರಾ ಫಾತಿಮಾ ಅವರು ಝೀರೋ ಟ್ರಾಫಿಕ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಝೀರೋ ಟ್ರಾಫಿಕ್ ಉತ್ತರ ಬರುತ್ತಿದ್ದಂತೆ ಕೋಪಗೊಂಡ ಗೃಹ ಸಚಿವರು, ಯಾರನ್ನು ಕೇಳಿ ಝೀರೋ ಟ್ರಾಫಿಕ್ ಕಲ್ಪಿಸಿದಿರಿ? ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಲ್ವಾ? ಇನ್ನು ಮುಂದೆ ಹೀಗೆ ಮಾಡುವಂತಿಲ್ಲ ಅಂತ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಮಾರ್ಗ ಮಧ್ಯದಲ್ಲಿಯೇ ಝೀರೋ ಟ್ರಾಫಿಕ್ ಕ್ಯಾನ್ಸಲ್ ಮಾಡಿಸಿದರು. ಈ ಮೂಲಕ ಸಾರ್ವಜನಿಕರಿಂದ ಅಪಾರ ಮೆಚ್ಚುಗೆಗೆ ನೂತನ ಗೃಹ ಸಚಿವರು ಪಾತ್ರರಾಗಿದ್ದಾರೆ.

ಈ ಹಿಂದೆ ಗೃಹ ಖಾತೆ ವಹಿಸಿಕೊಂಡಿದ್ದ ಜಿ.ಪರಮೇಶ್ವರ್ ಸಂಪ್ರದಾಯಕ್ಕೆ ನೂತನ ಗೃಹ ಸಚಿವ ಎಂಬಿ ಪಾಟೀಲ್ ಎಳ್ಳು ನೀರು ಬಿಟ್ಟಿದ್ದಾರೆ. ಈ ಮೂಲಕ ಎಗ್ಗಿಲ್ಲದೇ ಬಳಕೆಯಾಗುತ್ತಿದ್ದ ಝೀರೋ ಟ್ರಾಫಿಕ್ ಸಂಪ್ರದಾಯಕ್ಕೆ ಅಂತ್ಯ ಹಾಡಿದ್ದಾರೆ.

ಇಂದು ನೂತನ ಗೃಹ ಸಚಿವರಾದ ಎಂ.ಬಿ.ಪಾಟೀಲ್, ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ. ಸಿಗ್ನಲ್ ಫ್ರೀ ಕೊಟ್ಟರೆ ಸಾಕು ಎಂದು ಸುದ್ದಿಗೋಷ್ಠಿಯಲ್ಲಿ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಮೂಲಕ ಖಾತೆ ಬಿಟ್ಟು ಕೊಡಲು ಸತಾಯಿಸಿದ್ದಕ್ಕೆ ಪರಮೇಶ್ವರ್ ಅವರಿಗೆ ತಿರುಗೇಟು ಕೊಟ್ಟರಾ ಎಂಬ ಸಣ್ಣದೊಂದು ಚರ್ಚೆ ಕಾಂಗ್ರೆಸ್ ಅಂಗಳದಲ್ಲಿ ಆರಂಭವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *