ಕಾಂಗ್ರೆಸ್ಸವ್ರು ಯಾವ್ದೋ ಪೆಟ್ರೋಲ್, ಡೀಸೆಲ್ ಹಿಡ್ಕೊಂಡು ಅಲ್ಲಾಡ್ತಿದ್ದಾರೆ, ಇನ್ನೊಂದು 4 ದಿನ ಅಲ್ಲಾಡ್ಲಿ: ಈಶ್ವರಪ್ಪ

ಗದಗ: ಕಾಂಗ್ರೆಸ್ಸಿನವರು ಯಾವುದೋ ಪೆಟ್ರೋಲ್, ಡೀಸೆಲ್ ವಿಚಾರ ಹಿಡ್ಕೊಂಡು ಅಲ್ಲಾಡುತ್ತಿದ್ದಾರೆ. ಇನ್ನೊಂದ್ ನಾಲ್ಕು ದಿನ ಅಲ್ಲಾಡ್ಲಿ. ಮುಂದಿನ ದಿನದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಆಗುತ್ತೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಗದಗನ ವಿಠಲಾರೂಢ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಓಬಿಸಿ ಪದಾಧಿಕಾರಿಗಳ ಕಾರ್ಯಕಾರಿಣಿ ಹಾಗೂ ವಿಶೇಷ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡೀಸೆಲ್ ಬೆಲೆ ನೂರರ ಗಡಿ ದಾಟಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಹೆಚ್ಚಾಯಿತು ಅಂತ ಕಾಂಗ್ರೆಸ್ ನವರು ಅಬ್ಬರಿಸಿ ಬೊಬ್ಬರಿಯುತ್ತಾರಲ್ಲಾ, ಸ್ವಾತಂತ್ರ್ಯ ಬಂದಾಗಿನಿಂದಲೂ ಪೆಟ್ರೋಲ್, ಡಿಸೇಲ್, ಗ್ಯಾಸ್ ಈ ವಸ್ತುಗಳ ಬೆಲೆ ಜಾಸ್ತಿ ಆಗಿಲ್ವಾ? ಕಾಂಗ್ರೆಸ್ ಜಾಸ್ತಿ ಮಾಡಿಲ್ವಾ? ಜಾಸ್ತಿ, ಕಮ್ಮಿ ಆಗೋದು ಪ್ರಕ್ರಿಯೆ ಕಂಟ್ರೋಲ್ ಮಾಡೋದಕ್ಕೆ ಪ್ರಯತ್ನ ಮಾಡ್ತೀವಿ. ಬೆಲೆ ಏರಿಕೆ ವಿಚಾರ ಒಪ್ಪಿಕೊಳ್ಳುತ್ತೇನೆ. ಬೇರೆ ಏನು ಒಳ್ಳೆದು ಆಗಿಲ್ವಾ? ಯಾವ್ದು ಒಳ್ಳೆಯದಿದೆ ಅದರ ಸುದ್ದಿ ಕಾಂಗ್ರೆಸ್ ಎತ್ತಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ

ಇದೇ ವೇಳೆ ಬೆಂಗಳೂರು ಉಸ್ತುವಾರಿಗೆ ಸಚಿವ ವಿ.ಸೋಮಣ್ಣ ಹಾಗೂ ಆರ್. ಅಶೋಕ್ ಪೈಪೋಟಿ ವಿಚಾರ ಸಂಬಂಧ ಮಾತನಾಡಿ, ಪೈಪೋಟಿ ಯಾಕೆ ಇರ್ಬಾದ್ರು? ರಾಜಕಾರಣದಲ್ಲಿ ಸಣ್ಣಪುಟ್ಟ ಪೈಪೋಟಿಗಳು ಇರುತ್ತವೆ. ಏನೂ ಇಲ್ಲ ಅಂತಾ ನಾನು ಹೇಳೊಕಾಗಲ್ಲ, ಸಮಸ್ಯೆ ಇದ್ರೆ ಬಗೆಹರಿಸಿಕೊಳ್ಳುತ್ತೇವೆ. ಭಿನ್ನಾಭಿಪ್ರಾಯ ಇದ್ರೆ ದೊಡ್ಡವರ ಸಮ್ಮುಖದಲ್ಲಿ ಬಗೆಹರಿಸಿಳ್ಳುತ್ತೇವೆ ಎಂದರು. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ

ಹಾನಗಲ್ ಹಾಗೂ ಸಿಂದಗಿ ಉಪಚುನಾಣೆ ಬಗ್ಗೆಯೂ ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ವಾಗ್ದಾಳಿ ನಡೆಸಿದರು. ಗೆಲುವು ನಮ್ಮದೇ ಎಂಬುದು ಕಾಂಗ್ರೆಸ್ಸಿನವರದ್ದು ಕೇವಲ ಭ್ರಮೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಇದ್ದಾಗ ಹೀಗೆ ಹೇಳ್ತಿದ್ರು. ಈಗ ಸರ್ಕಾರ ನಮ್ಮದೇ ಇದೆ, ಮುಂದೆಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆದರೆ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೆಗೆದು ಬಿದ್ರು ಅಂತ ಕಟುವಾಗಿ ಟೀಕಿಸಿದರು.

Comments

Leave a Reply

Your email address will not be published. Required fields are marked *