5 ವರ್ಷ ನಾವೇ ಸರ್ಕಾರ ನಡೆಸ್ತೀವಿ: ಸಚಿವ ಕೆಜೆ ಜಾರ್ಜ್

– ಬಿಜೆಪಿಯ ನಂಬರ್ ಗೇಮ್ ವರ್ಕೌಟ್ ಆಗಲ್ಲ

ಬೆಂಗಳೂರು: ಶಾಸಕರಿಬ್ಬರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಐದು ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರ ಸೇಫ್ ಆಗಿರುತ್ತದೆ ಎಂದು ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಮಾತನಾಡಿದ ಸಚಿವರು, ಶಾಸಕರು ರಾಜೀನಾಮೆ ಕೊಡುವುದು ಅವರ ವೈಯಕ್ತಿಕ ವಿಚಾರ. ಇದೀಗ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಏನೇ ಸಮಸ್ಯೆ ಬಂದರೂ ಸಿಎಂ ಹಾಗೂ ಸಿಎಲ್‍ಪಿ ನಾಯಕರು ಸರಿಪಡಿಸುತ್ತಾರೆ. ಯಾರೇ ರಾಜೀನಾಮೆ ಕೊಟ್ಟರೂ ಸರ್ಕಾರಕ್ಕೆ ಏನೂ ಆಗಲ್ಲ. ಐದು ವರ್ಷ ಸರ್ಕಾರವನ್ನು ನಾವೇ ನಡೆಸುತ್ತೀವೆ ಎಂದರು.

ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಂತೆ ಸಿಎಂ ಆಯ್ಕೆ ಮಾಡಲಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಕೂಡ ಯಶಸ್ವಿಯಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇದಾಗಿಯೂ ಸರ್ಕಾರ ಬಂದ ಒಂದು ವರ್ಷದಿಂದ ವದಂತಿಗಳು ತಪ್ಪಿಲ್ಲ. ನಂಬರ್ ಗೇಮ್ ವರ್ಕೌಟ್ ಆಗಲ್ಲ ಎಂದು ಸಚಿವರು ಬಿಜೆಪಿಗೆ ಟಾಂಗ್ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪ್ರಯತ್ನಿಸುತ್ತಿಲ್ಲ. ಅವರು ಎದುರಾಳಿ ಪಕ್ಷಕ್ಕೆ ಅಭದ್ರತೆ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ ಎಂಬ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆಯನ್ನು ಸಚಿವ ಜಿ.ಟಿ.ದೇವೇಗೌಡರು ಪುನರುಚ್ಛಿಸಿದ್ದಾರೆ. ಒಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿದರೂ ಸರ್ಕಾರಕ್ಕೆ ತೊಂದರೆ ಇಲ್ಲ ಎಂದು ಕೆ.ಜೆ.ಜಾರ್ಜ್ ಹೇಳಿದರು.

Comments

Leave a Reply

Your email address will not be published. Required fields are marked *